ರಾಯಬಾಗ: ಲೋಂಡಾ–ಮೀರಜ್ ಹಾಗೂ ಕೊಲ್ಲಾಪುರ –ಪುಣೆ ನಡುವಿನ ಜೋಡು ಹಳಿಗಳ ಕಾಮಗಾರಿ ಪ್ರಗತಿ ಯಲ್ಲಿದ್ದು ಈ ಕಾಮಗಾರಿ ಬರುವ ಎರಡು ವರ್ಷಗಳಲ್ಲಿ ಸಂಪೂರ್ಣ ವಾಗಲಿದೆ. ಇದಕ್ಕಾಗಿ ₹1187 ಕೋಟಿ ಹಣ ಮಂಜೂರಾಗಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ಸೋಮವಾರ ರಾಯಬಾಗ ರೇಲ್ವೆ ನಿಲ್ದಾನದ ಬಳಿಯ ಲೆವಲ್ ಕ್ರಾಸಿಂಗ್ ಗೆ ಮೇಲ್ಸೆತುವೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೀರಜ್–ಲೋಂಡಾ ಜೋಡು ಹಳಿ ಮಾರ್ಗಕ್ಕೆ ₹88 ಕೋಟಿ ಅನುದಾನವಿದೆ. ಕುಡಚಿ–ಬಾಗಲಕೋಟ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ರಾಯ ಬಾಗದ ಲೇವಲ್ ಕ್ರಾಸಿಂಗ್ ಮೇಲ್ಸೆತು ವೆಗಾಗಿ ₹11.83 ಕೋಟಿ ಮಂಜೂರಾ ಗಿದ್ದು ಸೇತುವೆ ಆರು ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಗೋಕಾಕ, ಘಟಪ್ರಭಾ, ಚಿಕ್ಕೋಡಿ, ರಾಯಬಾಗ, ಚಿಂಚಲಿ, ಕುಡಚಿ,ಉಗಾರ ಮತ್ತು ಶೇಡಬಾಳ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಅಲ್ಲೆಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲು ರೈಲ್ವೆ ಅಧಿಕಾ ರಿಗಳಿಗೆ ಸೂಚಿಸಿ ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದರು.
ರಾಜ್ಯದಲ್ಲಿ ಭೀಕರ ಬರ ಇರುವದರಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸಲು ₹ 68 ಕೋಟಿ ಅನುದಾನದ ಪ್ರಸ್ತಾವ ಸಲ್ಲಿಸಿದ್ದು ಅದು ಮಂಜೂರಾತಿ ಯಲ್ಲಿದೆ ಎಂದರು.
ಬೇಸಿಗೆಯಲ್ಲಿ ಕೃಷ್ಣಾ ನದಿಗೆ ನೀರು ಹರಿಸುವ ಭರವಸೆ ನೀಡಿದ ಅವರು ನೀರಿನ ವಿಷಯದಲ್ಲಿ ರಾಜಕೀಯ ಬೇಡ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಕೆರೆಗಳನ್ನು ತುಂಬಿಸುವ ಪ್ರಸ್ತಾಪವಿದ್ದು, ರೈತರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವಂತೆ ಸಲಹೆ ಮಾಡಿದರು. ಬರಗಾಲದಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ಸಲಹೆ ಮಾಡಿದರು.
ರೇಲ್ವೆ ಇಲಾಖೆಯ ಕಾರ್ಯ ನಿರ್ವಾಹಕ ಎಂಜನಿಯರ್ ಎಸ್.ಎ. ಬ್ಯಾನರ್ಜಿ ಮಾತನಾಡಿ, ಮೀರಜ್–ಲೋಂಡಾ ಜೋಡಿ ಮಾರ್ಗ, ಕುಡಚಿ–ಬಾಗಲಕೋಟ ಮಾರ್ಗದ ಬಗ್ಗೆ ವಿವರಿಸಿ ಕುಡಚಿ –ಬಾಗಲಕೋಟ ರೈಲ್ವೆ ಮಾರ್ಗ ಬಾಗಲಕೋಟಿಯಿಂದ ಖಜ್ಜಿ ಡೊನಿವರೆಗೆ ಬಂದಿದೆ. ಈ ಭಾಗದಲ್ಲಿ 150 ಎಕರೆ ಭೂಮಿ ಅವಶ್ಯಕತೆ ಇದೆ. ಕುಡಚಿ ಹಾರೂಗೇರಿ ನಡುವೆ ಶೇ 50 ರಷ್ಟು ಭೂಮಿ ಮಂಜೂರಾಗಿದೆ. ಕುಡಚಿ ಬಳಿ ಕೃಷ್ಣಾ ನದಿಗೆ ನೂತನ ಸೇತುವೆ ಮುಗಿಯುವ ಹಂತದಲ್ಲಿದೆ ಎಂದು ತಿಳಿಸಿದರು.
ಶಾಸಕ ದುರ್ಯೋಧನ ಐಹೊಳೆ ಅಧ್ಯಕ್ಷತೆ ವಹಿಸಿದ್ದರು.
ಕುರ್ಲಾ–ಯಶವಂತಪುರ, ಹುಬದಳಿ– ಲೋಕಮಾನ್ಯ ಟಿಳಕ ರೈಲು ರಾಯಬಾಗದಲ್ಲಿ ನಿಲುಗಡೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರೆಸ್ ಕ್ಲಬ್ ಅಧ್ಯಕ್ಷ ಹನಮಂತ ಸಾನೆ ನೇತೃತ್ವದಲ್ಲಿ ಸಂಸದರಿಗೆ ಮನವಿ ಸಲ್ಲಿಸಿದವು.
ಪಾಟೀಲ, ಮಹಾವೀರ ಮೋಹಿತೆ, ಈರಗೌಡ ಪಾಟೀಲ, ರವಿಶಂಕರ ನರಗಟ್ಟಿ, ಆರತಿ ಕಾಂಬಳೆ, ಭೀಮು ಹಳಿಂಗಳಿ, ಸುಕುಮಾರ ಕಿರನಗಿ, ದಿಲಿಪ ಜಮಾದಾರ, ಅರ್ಜುನ ನಾಯಕವಾಡಿ, ಉಪವಿಭಾಗಾಧಿಕಾರಿ ಗೀತಾ ಕೌಲಗಿ, ತಹಶೀಲ್ದಾರ್ ಕೆ.ಎನ್.ರಾಜಶೇಖರ, ಡಿ.ಎನ್.ದೇಸಾಯಿ ಇದ್ದರು.
ಡಿ.ಎಸ್ .ನಾಯಕ ಸ್ವಾಗತಿಸಿದರು. ಬಿ.ಎನ್. ಬಂಡಗಾರ ನಿರೂಪಿಸಿದರು. ಧೂಳಗೌಡ ಪಾಟೀಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.