ಕುರುಗೋಡು: ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ ಸಂಗತಿ. ಇಲ್ಲಿನ ತುಂಗಭದ್ರಾ ಕೆಳಮಟ್ಟದ ಕಾಲುವೆ ಕೂಡ ನೀರಿಲ್ಲದೇ ಒಣಗಿ ನಿಂತಿದೆ. ಆದರೆ ಈ ಬಾರಿಯೂ ಕೂಡ ಕೊಪ್ಪಳ ಭಾಗದ ಕೆಲ ದನಗಾಹಿಗಳು ತಮ್ಮ ದನ ಕರುಗಳನ್ನು ಹೊಡೆದು ಕೊಂಡು ಈ ಭಾಗಕ್ಕೆ ಬಂದಿರುವುದು ಪಟ್ಟಣದ ಹೊರವಲಯದಲ್ಲಿ ಕಾಣಸಿಗುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದ ಕಾರಣ ಮೊದಲನೇ ಬೆಳೆಗೆ ಸಮರ್ಪಕ ನೀರು ದೊರೆತಿಲ್ಲ. ಜಲಾಶಯದಲ್ಲಿ ನೀರು ಸಂಗ್ರಹವಾಗದ ಕಾರಣ ಎರಡನೇ ಬೆಳೆ ಬೆಳೆಯಲು ಅವಕಾಶ ವಂಚಿತರಾದ ರೈತರು ಚಿಂತೆಗೀಡಾದರೆ ಬೇಸಿಗೆಯಲ್ಲಿ ಹಸಿರಿಗಾಗಿ ನೀರಾವರಿ ಪ್ರದೇಶವನ್ನು ನೆಚ್ಚಿಕೊಂಡಿದ್ದ ವಲಸೆ ಜಾನುಗಾರುಗಳು ಮೇಯಲು ಹುಲ್ಲು, ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರು ತಾವು ಬೆಳೆದ ಮುಂಗಾರು ಬೆಳೆಯ ನಂತರ ಜಾನುವಾರುಗಳ ಸಂರಕ್ಷಣೆಗಾಗಿ ಬೇಸಿಗೆಯಲ್ಲಿ ಹಸಿರು ಹುಲ್ಲು ದೊರಕುವ ಕುರುಗೋಡು ಭಾಗಕ್ಕೆ ಪ್ರತಿವರ್ಷ ವಲಸೆ ಬರುತ್ತಾರೆ.
ಆದರೆ ಹಸಿರು ಹುಲ್ಲು ಮತ್ತು ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ.
ಮುಂಗಾರು ಬೆಳೆ ಬಳಿಕ ನಮ್ಮಲ್ಲಿ ಯಾವುದೇ ಕೃಷಿ ಚಟುವಟಿಕೆ ಇರುವು ದಿಲ್ಲ. ಬೇಸಿಗೆಯಲ್ಲಿ ದನಕರುಗಳಿಗೆ ಮೇವು ಸಿಗುವುದೂ ಕಷ್ಟ. ನಾಲ್ಕು ತಿಂಗಳ ಕಾಲ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ನೀರಾವರಿ ಪ್ರದೇಶಗಳಿಗೆ ವಲಸೆ ಬರುತ್ತೇವೆ. ಆದರೆ ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿ ಎರಡನೇ ಬೆಳೆಗೆ ನೀರು ಪೂರೈಸದ ಪರಿಣಾಮ ಸಾವಿರಾರು ಎಕರೆ ಭೂಪ್ರದೇಶ ಬೀಳು ಬಿದ್ದಿದೆ. ಇದರಿಂದ ಜಾನುವಾರುಗಳಿಗೆ ಮೇವು, ನೀರು ಇಲ್ಲದಾಗಿದೆ. ಇವುಗಳನ್ನು ಆ ದೇವರೇ ಕಾಪಾಡಬೇಕು ಎಂದು ಕನಕಗಿರಿಯಿಂದ 300ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಬಂದಿದ್ದ ಬಸವಣ್ಯಪ್ಪ ಅಳಲು ತೋಡಿಕೊಂಡರು.
ಈ ಭಾಗದ ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಮೇವಿನ ಕೊರತೆಯಿಂದ ನಿರ್ವಹಣೆ ಸಮಸ್ಯೆ ಎದುರಿಸುತ್ತಿರುವ ಕೆಲವರು ಜಾನುವಾರು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜಾನುವಾರುಗಳ ರಕ್ಷಣೆಗೆ ಸರ್ಕಾರ ಆಯ್ದ ಭಾಗಗಳಲ್ಲಿ ಗೋಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.