ಚಾಮರಾಜನಗರ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಕಠಿಣ ಸಜೆ ಹಾಗೂ ₹ 3 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕೊಳ್ಳೇಗಾಲ ತಾಲ್ಲೂಕಿನ ರಾಮಾ ಪುರದ ಪೆದ್ದನಪಾಳ್ಯ ಗ್ರಾಮದ ಪೆರಿಯ ಸ್ವಾಮಿ ಅಲಿಯಾಸ್ ಸೇಟು ಎಂಬಾತ 2015ರ ಮೇ 30ರಂದು ಬಾಲಕಿಯನ್ನು ತನ್ನ ಮೋಟಾರು ಬೈಕಿನಲ್ಲಿ ಅಪಹರಿಸಿ ತಮಿಳುನಾಡು ರಾಜ್ಯದ ವೆಳ್ಳಂಪಟ್ಟಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು.
ಈ ಬಗ್ಗೆ ಪ್ರಕರಣ ವಿಚಾರಣೆ ನಡೆದು ಆರೋಪ ರುಜುವಾತಾಗಿದ್ದರಿಂದ ಅಪರಾಧಿಗೆ ಐಪಿಸಿ 366, 343, 376 ಹಾಗೂ ಫೋಕ್ಸೊ ಕಾಯ್ದೆಯಡಿ ಕಠಿಣ ಸಜೆ ಹಾಗೂ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಸೂಕ್ತ ಪರಿಹಾರ ಕ್ಕಾಗಿ ಜಿಲ್ಲಾ ಕಾನೂನು ಸಮಿತಿಗೆ ಪರಿಹಾರ ನೀಡಲು ಜಿಲ್ಲಾ ನ್ಯಾಯಾ ಧೀಶರು ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್. ನಾಗರಾಜು ವಾದ ಮಂಡಿಸಿದ್ದರು.