ಚನ್ನಪಟ್ಟಣ: ತಾಲ್ಲೂಕಿನ ಸೋಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಕ್ಷೇತ್ರಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಎನ್.ಎಸ್.ಉಮೇಶ್ ನುಣ್ಣೂರು, ಜಿ.ಕೃಷ್ಣೇಗೌಡ ಗರಕಹಳ್ಳಿ, ಚಿಕ್ಕಣಗೌಡ ಸಾದಹಳ್ಳಿ, ಎಲ್.ರವಿಕುಮಾರ್ ವಿ.ಜಿ.ದೊಡ್ಡಿ ಮತ್ತು ಸಿದ್ದರಾಮು ಹಾರೋಕೊಪ್ಪ ಜಯ ಗಳಿಸಿದ್ದಾರೆ.
ಹಿಂದುಳಿದ ವರ್ಗದ ಕ್ಷೇತ್ರದಿಂದ ಅಂದಾನಿ ಹೆಗ್ಗಡೆ ಸೋಗಾಲ ಮತ್ತು ತಿಮ್ಮಮ್ಮ ಗರಕಹಳ್ಳಿ, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಕೆಂಪಾಜಮ್ಮ ಅಂಕುಶನಹಳ್ಳಿ ಮತ್ತು ನಾಗಸುಂದರಮ್ಮ ನೇರಳೂರು, ಸಾಲಗಾರರಲ್ಲದ ಕ್ಷೇತ್ರದಿಂದ ಶಶಿಧರ್ ಸೋಗಾಲ ಹಾಗೂ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ದೊಡ್ಡತಮ್ಮಯ್ಯ ಹಾರೋಕೊಪ್ಪ ಚುನಾಯಿತರಾಗಿದ್ದಾರೆ.
30ವರ್ಷಗಳಿಂದ ಜೆಡಿಎಸ್ ಬೆಂಬಲಿತರೇ ಸಂಘದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ಬಾರಿಯೂ ಅದು ಮುಂದುವರೆದಿದೆ. ಚುನಾವಣಾಧಿಕಾರಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಿದರು. ಜಯ ಗಳಿಸಿದ ಅಭ್ಯರ್ಥಿಗಳನ್ನು ಸಂಘದ ನಿರ್ದೇಶಕ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ಧೇಶಕ ಎಸ್.ಲಿಂಗೇಶ್ ಕುಮಾರ್, ಜೆಡಿಎಸ್ ಮುಖಂಡರು ಅಭಿನಂದಿಸಿದ್ದಾರೆ.