ಮಡಿಕೇರಿ: ‘ಮಕ್ಕಳ ಮೇಲೆ ಒತ್ತಡ ಹೇರದೇ ಅವರ ಮನಸ್ಸು ಅರ್ಥೈಸಿ ಕೊಂಡು ಮಾರ್ಗದರ್ಶನ ನೀಡಬೇಕು’ ಎಂದು ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಮನವಿ ಮಾಡಿದರು.
ನಗರದಲ್ಲಿ ಮೈತ್ರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಮಕ್ಕಳ ಹಬ್ಬದಲ್ಲಿ ಅವರು ಮಾತನಾಡಿದರು.
‘ಮಕ್ಕಳ ಮೇಲೆ ಎಂದಿಗೂ ಒತ್ತಡ ತಾರದೇ ಅವರಲ್ಲಿ ಅಡಗಿರುವ ಪ್ರತಿಭೆ ಹೊರತರುವ ಪ್ರಯತ್ನ ಮಾಡಬೇಕು. ಪ್ರತಿ ಮಕ್ಕಳಲ್ಲೂ ಪ್ರತಿಭೆ, ವಿಶೇಷ ಆಸಕ್ತಿ ಇದ್ದೇ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.
-ಮಕ್ಕಳು ಮುಂದಿನ ಪ್ರಜೆಗಳು; ಮಕ್ಕಳು ಈಗ ಕಲಿತಿದ್ದನ್ನು ಮುಂದೆ ಮೈಗೂಡಿಸಿಕೊಳ್ಳಬೇಕು. ಮಕ್ಕಳು ನೀವು ರಂಜಿಸಿ ಇತರರನ್ನು ರಂಜಿಸಿ, ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳಿಗೆ ಸೂಕ್ತ ವಾತಾವರಣ ನಿರ್ಮಿಸಿ ಕೊಡು ವುದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಉತಮ ಪ್ರಜೆಯಾಗಲು ಹಾಗೂ ಅವರ ಸ್ವಾವಲಂಬಿ ಜೀವನಕ್ಕೆ ಅಡಿಪಾಯ ಹಾಕುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಸಾಧಕ ಮಕ್ಕಳಿಗೆ ಪುರಸ್ಕಾರ: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪಿ.ಬಿ. ಹೇಮಂತ್, ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ವಿ.ಎನ್. ಅರ್ಚನಾ, ಕೊಡಗು ಕೇಂದ್ರೀಯ ವಿದ್ಯಾಯಲಯದ ನೂತನ್, ಗೋಣಿಕೊಪ್ಪಲು ಲಯನ್ಸ್ ಪ್ರೌಢಶಾಲೆಯ ದೀಪಾಲಿ ದೇಚಮ್ಮ ಎನ್.ಎ., ಹಾರಂಗಿ ಜ್ಞಾನಗಂಗಾ ರೆಸಿಡೆನ್ಸಿಯಲ್ ಶಾಲೆಯ ರವೀನಾ ಧರ್ಮಪ್ಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಮೌಲ್ಯಾ, ಅಕ್ಷತಾ ದೇವಿ ಹಾಗೂ ಕೋಡಿ ಲಾಸ್ಯ ಚಂದ್ರಶೇಖರ್ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಉಪ ನಿರೀಕ್ಷಕ ಕರೀಂ ರಾವತರ್, ಮಕ್ಕಳ ಕಲ್ಯಾಣ ಸಮಿತಿಯ ಸದ್ಯಸರಾದ ಅನಿತಾ ಕಾವೇರಪ್ಪ, ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಮಮ್ತಾಜ್, ಕೆ.ವಿ.ಸತ್ಯಬಾಮ ಹಾಜರಿದ್ದರು.
ಮಕ್ಕಳ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದು ಗಮನಸೆಳೆಯಿತು. ಮಕ್ಕಳ ಹಬ್ಬದ ಅಂಗವಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಸ್ತು ಪ್ರದರ್ಶನ ಹಾಗೂ ಕಲಾ ಪ್ರದರ್ಶನ ನಡೆಯಿತು.