ಬೆಂಗಳೂರು: ‘ಕನ್ನಡಕ್ಕೆ ಡಬ್ ಆದ ಪರಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
‘ತಮಿಳು ನಟ ಅಜಿತ್ ಅಭಿನಯದ ‘ಸತ್ಯದೇವ್ ಐಪಿಎಸ್’ ಚಿತ್ರವನ್ನು ಮಾರ್ಚ್ 3ರಂದು ರಾಜ್ಯದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕೆಲವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.
‘ರಾಜ್ಯದಲ್ಲಿ ಡಬ್ಬಿಂಗ್ಗೆ ಅವಕಾಶ ನೀಡಬಾರದು. ಡಬ್ಬಿಂಗ್ ಚಿತ್ರಗಳಿಂದ ಸಾವಿರಾರು ಕಲಾವಿದರು, ಕೆಲಸಗಾರರು ಹಾಗೂ ತಂತ್ರಜ್ಞರು ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.
‘ಡಬ್ಬಿಂಗ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ (ಮಾ.3)ರಂದು ಸಭೆ ಕರೆಯಲಾಗಿದೆ. ಮಾ.11ರಂದು ಡಬ್ಬಿಂಗ್ ವಿರುದ್ಧ ಬೃಹತ್ ಮೆರವಣಿಗೆ ನಡೆಸುತ್ತೇವೆ. ಅಂದು ಚಿತ್ರರಂಗವನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.