ಬ್ರಹ್ಮಾವರ: ನರ್ಸರಿ ಉದ್ಯಮದಲ್ಲಿ ರೈತರು ಹೆಚ್ಚಿನ ಲಾಭವನ್ನು ಪಡೆದು ಕೊಳ್ಳಬಹುದು. ಮಾವು, ಹಲಸು, ಗೇರು, ಕಾಳುಮೆಣಸು ಮುಂತಾದ ಗಿಡಗಳನ್ನು ನರ್ಸರಿಯಲ್ಲಿ ತಯಾರು ಮಾಡಬಹುದು. ಗಿಡಗಳ ಬೇಡಿಕೆಗೆ ಅನುಗುಣವಾಗಿ ಕಸಿಗಿಡಗಳನ್ನು ತಯಾರಿಸಿದಲ್ಲಿ ಮಾತ್ರ ಹೆಚ್ಚಿನ ಲಾಭ
ಗಳಿಸಬಹುದು ಎಂದು ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಹೇಳಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಮತ್ತು ಬುಧವಾರ ನಡೆದ ತೋಟಗಾರಿಕೆ ಬೆಳೆಯಲ್ಲಿ ಸಸ್ಯಗಾರದ ನಿರ್ವಹಣೆ ಮತ್ತು ಕಸಿಕಟ್ಟುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಾರು ಪೇತ್ರಿಯ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಮಾತನಾಡಿ, ನರ್ಸರಿಯಲ್ಲಿ ಲಾಭಗಳಿಸಬೇಕೆಂದರೆ ನಾವು ಮೊದಲು ಉತ್ತಮ ಗುಣಮಟ್ಟದ ಗಿಡಗಳನ್ನು ಆಯ್ಕೆ ಮಾಡಿ, ಉತ್ತಮ ರೀತಿಯಲ್ಲಿ ಜಾಗರೂಕತೆಯಿಂದ ಪೋಷಣೆ ಮಾಡಿದರೆ ಮಾತ್ರ ಮುಂದೆ ಲಾಭಗಳಿಸಲು ಸಾಧ್ಯ ಎಂದರು.
ಕೆ.ವಿ.ಕೆಯ ಕಾರ್ಯಕ್ರಮ ಸಂಯೋಜಕ ಡಾ.ಬಿ.ಧನಂಜಯ, ರಿಪ್ಪನ್ಪೇಟೆಯ ಅನಂತಮೂರ್ತಿ ಜವಳಿ, ಜಿಲ್ಲಾ ಪಂಚಾಯಿತಿ ಸಹಾಯಕ ತೋಟಗಾರಕಾ ಅಧಿಕಾರಿ ಗುರುಪ್ರಸಾದ್, ಸಹವಿಸ್ತರಣಾ ನಿರ್ದೇಶಕ ಡಾ.ಎಸ್.ಯು ಪಾಟೀಲ್ ಉಪಸ್ಥಿತರಿದ್ದರು.
ವಿಷಯತಜ್ಞ ಚೈತನ್ಯ ಎಚ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನವೀನ್ ಎನ್ ವಂದಿಸಿದರು. ಸಂಜೀವ್ ಕ್ಯಾತಪ್ಪನವರ್ ಕಾರ್ಯಕ್ರಮ ನಿರೂಪಿಸಿದರು.