ಚಾಮರಾಜನಗರ: ‘ನರ್ಸಿಂಗ್ ವೃತ್ತಿ ಸೇವಾ ಕ್ಷೇತ್ರವಾಗಿದೆ. ಎಲ್ಲ ಉದ್ಯೋಗ ಕ್ಕಿಂತ ಪವಿತ್ರವಾದುದು. ಈ ವೃತ್ತಿ ಆಯ್ದು ಕೊಳ್ಳುವವರು ಸೇವಾ ಮನೋ ಭಾವ ಮತ್ತು ಮಾನವೀಯತೆ ಮೈಗೂಡಿಸಿ ಕೊಳ್ಳಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುರಾಂ ಸರ್ವೇಗಾರ ಹೇಳಿದರು.
ನಗರದ ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ 13ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳು ಮಾನ ಸಿಕ ಮತ್ತು ದೈಹಿಕವಾಗಿ ಬಳಲಿರುತ್ತಾರೆ. ಅವರನ್ನು ಶುಶ್ರೂಷಕರು ಕರುಣೆ, ಪ್ರೀತಿ ಮತ್ತು ವಿಶ್ವಾಸದಿಂದ ಕಂಡು ಉಪ ಚರಿಸಬೇಕು. ಅದೇ ಅವರಿಗೆ ಸಂಜೀವಿನಿ ಯಾಗಲಿದೆ. ಇದರಿಂದ ಅವರು ಬಹು ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿ ತೆರಳುತ್ತಾರೆ. ಆದರೆ, ಶುಶ್ರೂ ಷಕರು ಸದಾ ಕಾಲ ರೋಗಿಗಳೊಂದಿಗೆ ಇದ್ದು ಅವರ ಸೇವೆ ಮಾಡುತ್ತಾರೆ. ವೈದ್ಯರಿಗಿಂತ ಶುಶ್ರೂಷಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಿದೆ. ಹಾಗಾಗಿ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಮತೆಯನ್ನು ಧಾರೆ ಎರೆಯುವ ಮೂಲಕ ಮದರ್ ತೆರೆಸಾ ಮಾತೆ ಯಾದರು. ಅವರಂತೆ ವಿದ್ಯಾರ್ಥಿಗಳು ಮಮತೆ ತುಂಬಿಕೊಳ್ಳಬೇಕು. ಜತೆಗೆ, ಬದ್ಧತೆ ಹಾಗೂ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಬೇಕು. ಆಗ ಮಾತ್ರ ಈ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಎಚ್.ಜೆ. ಶಾರದಾ ಅವರು ಜ್ಯೋತಿ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಮಂಜುನಾಥ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಾಂಶುಪಾಲರಾದ ಜ್ಯೋತಿ ಹಾಜರಿದ್ದರು.