ಯಳಂದೂರು:(ಸಂಚಿಹೊನ್ನಮ್ಮ ವೇದಿಕೆ): ರಾಜ್ಯದಲ್ಲಿ ಕನ್ನಡ ಭಾಷೆಯ ಸ್ಥಿತಿ ಹೀನಾಯವಾಗಿದೆ. ಬೆಂಗಳೂರು ನಗರ ದಲ್ಲಿ ಇದು ಇನ್ನೂ ಬಿಗಡಾಯಿಸಿದೆ. ಕಾಣದ ಕೈಗಳು ಕನ್ನಡಾಂಬೆಯ ಕತ್ತನ್ನು ಹಿಚುಕುವ ಕೆಲಸವನ್ನು ಮಾಡುತ್ತಿದೆ ಎಂದು ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ವಿಷಾದಿಸಿದರು.
ಪಟ್ಟಣದ ಜಹಗೀರ್ದಾರ್ ಬಂಗಲೆ ಮುಂಭಾಗ ಗುರುವಾರ ಜಿಲ್ಲಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು. ಸಮಾರಂಭಗಳಲ್ಲಿ ಸಾಹಿತಿಗಳ ಬಗ್ಗೆ ಪ್ರೀತಿ ತೋರಿಸುವ ಬದಲು, ಸಾಹಿತ್ಯದ ಬಗ್ಗೆ ಪ್ರೀತಿ ಮೂಡಿಸಿ ಅದನ್ನು ಅಭ್ಯಸಿ ಸುವ ಮೂಲಕ ಜೀವಂತಿಕೆಯನ್ನು ಕಾಯ್ದುಕೊಳ್ಳಬೇಕಿದೆ. ಭಾಷೆಯ ಬಗ್ಗೆ ಒಳ್ಳೆ ಗುಣ ಇದ್ದರೆ ಅದನ್ನು ಜಾಗೃತಿಯಿಂದ ಜೋಪಿಡುವ ಜವಾಬ್ದಾರಿಯೂ ನಮ್ಮ ಮೇಲಿದೆ.
ಇಡೀ ದೇಶದಲ್ಲೇ ಶ್ರೀಮಂತ ಸಾಹಿತ್ಯವನ್ನು ಹೊಂದಿ ರುವ ನಾವು 8 ಜ್ಞಾನಪೀಠಗಳನ್ನು ಮುಡಿಗೇರಿಸಿ ಕೊಂಡಿ ದ್ದೇವೆ. ಇನ್ನೂ 8 ಜನರಿಗೆ ಜ್ಞಾನಪೀಠ ಸಿಗುವ ಸಾಹಿತಿಗಳು ನಮ್ಮಲ್ಲಿದ್ದಾರೆ. ಆದರೆ ಅವರ ಸಾಹಿತ್ಯವನ್ನು ಓದುವ ಗೋಜಿಗೆ ಇಂದಿನ ಪೀಳಿಗೆ ಹೋಗದಿರುವುದು ವಿಷಾದನೀಯ ಎಂದರು.
ಇದಕ್ಕೂ ಮುಂಚೆ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚನ ಮಾಡುವ ಮೂಲಕ ಗಮನ ಸೆಳೆದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದವರಿಗೆ ಕಾರಾಪುರ ವಿರಕ್ತಮಠದ ಬಸವರಾಜಸ್ವಾಮಿಗಳ ಸಾನ್ನಿಧ್ಯದಲ್ಲಿ ಸನ್ಮಾನಿಸಲಾಯಿತು.
ಶಾಸಕರಾದ ಎಸ್.ಜಯಣ್ಣ, ಸಿ.ಪುಟ್ಟರಂಗಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಸಿ.ಶಿವಪ್ಪ ಮಾತನಾಡಿದರು. ಚೂಡಾ ಅಧ್ಯಕ್ಷ ಸುಹೇಲ್ಖಾನ್, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ತಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಮಹದೇವ ನಾಯಕ, ಮುಳ್ಳೂರು ಶಿವಮಲ್ಲು, ಸದಾಶಿವ ಕುಲಾಲ್, ಮಾಜಿ ಶಾಸಕ ಎಸ್.ಬಾಲರಾಜು, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ವಿನಯ್, ತಾಲ್ಲೂಕು ಅಧ್ಯಕ್ಷ ಮದ್ದೂರು ವಿರೂಪಾಕ್ಷ ಇದ್ದರು.
ಶಿವಪ್ಪರ ಸಾಹಿತ್ಯ ಕೃಷಿ ಮಾದರಿ
ಯಳಂದೂರು: ಬದುಕು ಸಾಹಿತ್ಯ ಕೃಷಿಯಲ್ಲಿ ಇವರ ಸಾಧನೆ ಜಿಲ್ಲೆಗೆ ಮಾದರಿಯಾಗಿದೆ ಎಂದು ವಿಮರ್ಶಕ ಡಾ. ನಂದೀಶ್ ಹಂಚೆ ತಿಳಿಸಿದರು.
ಅವರು ಗುರುವಾರ 7 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಸಿ.ಶಿವಪ್ಪ ಅವರ ಬದುಕು ಬರಹ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಸೊಗಡು, ಜಾನಪದ ನುಡಿಗಟ್ಟುಗಳು ಇಲ್ಲಿಯ ಭಾಷೆಯ ಚಂದವನ್ನು ಹಿಡಿದಿಟ್ಟುರುವ ಇವರ ಕೃತಿಗಳಲ್ಲಿ ದೇಸೀಯತೆ ಸೊಬಗು ಹೆಚ್ಚಾಗಿದೆ. ಸಾಹಿತ್ಯ ಕೃಷಿಯಲ್ಲಿ ಶುಚಿ-ರುಚಿಯನ್ನು ಹೆಚ್ಚಾಗಿ ಕಾಣಬಹುದು ಎಂದರು.
ಮೈಸೂರು ವಿವಿಯ ಪ್ರಾಧ್ಯಪಕ ಪ್ರೊ. ನೀಲಗಿರಿ ತಳವಾರ್ ಚೌಪದಿಗಳ ಕುರಿತು, ಸಂಶೋಧನಾ ವಿದ್ಯಾರ್ಥಿನಿ ಕೆ.ಎಂ. ಜ್ಯೋತಿ ಯವರು ಕಾವ್ಯ ಕುರಿತು, ಅಂಕಣ ಕಾರ ತ್ರಿಪುರಾಂತಕ ಬದುಕು ಕುರಿತು ವಿಷಯ ಮಂಡನೆ ಮಾಡಿದರು. ರೈತ ಚಳವಳಿ ಬಗ್ಗೆ ಹೊನ್ನೂರು ಪ್ರಕಾಶ್, ದಲಿತ ಚಳವಳಿ ಬಗ್ಗೆ ಉಪನ್ಯಾಸಕ ಮಹಾದೇವ್ ಮಾತನಾಡಿದರು.
ನಂತರ ನಡೆದ ಚಾಮರಾಜನಗರ ಜನಪರ ಚಳವಳಿಗಳ ಪ್ರಸ್ತುತತೆ ಕುರಿತ ಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಎಸ್.ಬಾಲರಾಜು ಗೋಷ್ಠಿಗಳ ಅಧ್ಯಕ್ಷತೆ ಯನ್ನು ಅಂಕಣಕಾರ ಚಿನ್ನಸ್ವಾಮಿ ವಡ್ಡಗೆರೆ, ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ವಿ.ಪುಷ್ಪಕುಮಾರ್ ವಹಿಸಿ ದ್ದರು. ರಾಜು, ಮಹಾದೇವ, ಚಂದ್ರಕುಮಾರ್, ಮುರುಳೀಧರ, ವಿ. ಸುಂದರ, ನಾಗರಾಜು ಬರಗಿ, ಮಲ್ಲಿಕಾರ್ಜುನಸ್ವಾಮಿ ತಾ.ಪಂ. ಸದಸ್ಯರಾದ ಮಲ್ಲಾಜಮ್ಮ, ಶಾರದಾಂಬ, ನಾಗರಾಜು, ಪುಟ್ಟಸುಬ್ಬಪ್ಪ, ಚಂದ್ರಶೇಖರ್ ಇತರರು ಇದ್ದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ
ಯಳಂದೂರು: ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಎಫ್ಎಂ ಕೇಂದ್ರ ಆರಂಭಿಸುವುದೂ ಸೇರಿದಂತೆ 5 ನಿರ್ಣಯಗಳನ್ನು ಚಾಮರಾಜನಗರ ಜಿಲ್ಲಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಆಕಾಶವಾಣಿ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ ನಾಲ್ಕು ತಾಲ್ಲೂಕುಗಳು ಆಕಾಶವಾಣಿಯಿಂದ ಹೊರತಾಗಿದ್ದು ಪ್ರಸಾರ ಭಾರತಿ ಯನ್ನು ಆಗ್ರಹಿಸುವುದು. ತಮಿಳು ನಾಡು ಹಾಗೂ ಕೇರಳ ರಾಜ್ಯಗಳ ಗಡಿಯನ್ನು ಹೊಂದಿರುವ ಜಿಲ್ಲೆಯಲ್ಲಿ ಗಡಿ ಭಾಗದ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕವನ್ನು ಪುಸ್ತಕ ಅಭಿವೃದ್ಧಿ ಪ್ರಾಧಿಕಾರ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಹೊರ ರಾಜ್ಯದಲ್ಲಿ ಕನ್ನಡ ಕಲಿತು ಶಿಕ್ಷಣ ರಾಜ್ಯದಲ್ಲಿ ಮುಂದುವರೆಸುವವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು.
ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚುರುಕು ಮುಟ್ಟಿಸುವುದು. ಕನ್ನಡ ಪುಸ್ತಕ ಮಾರಾಟವನ್ನು ಉತ್ತೇಜಿಸುವ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿ ಯಿಂದ ಪುಸ್ತಕ ಮಳಿಗೆಯನ್ನು ತೆರೆಯಬೇಕು. ನಿರುದ್ಯೋಗಿ ಕನ್ನಡ ಪದವಿ ವಿದ್ಯಾರ್ಥಿಗಳಿಗೆ ಮಳಿಗೆ ತೆರೆಯಲು ಸಹಾಯ ಮಾಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಸ್ನಾತಕೋತ್ತರ ಕೇಂದ್ರವನ್ನು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಘೋಷಣೆ ಮಾಡಬೇಕು ಎಂದು ಸಮ್ಮೇಳನ ದಲ್ಲಿ ನಿರ್ಣಯಿಸಲಾಯಿತು.
ಸಾರ್ವಜನಿಕರ ನಿರಾಸಕ್ತಿ
ಪಟ್ಟಣದಲ್ಲಿ ನಡೆಯುತ್ತಿರುವ 2 ದಿನಗಳ 7 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರ ಹಾಗೂ ಸಾರ್ವಜನಿಕರ ನಿರಾಸಕ್ತಿ ಗುರುವಾರ ಸಹ ಕಾಡಿತು.
ಬೆಳಿಗ್ಗೆ ನಡೆದ ಪ್ರಭಾತ ಪೇರಿಯಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ಮಾತ್ರ ಸೀಮಿತವಾಯಿತು. ಉಳಿದಂತೆ ನಡೆದ ಮೂರು ಗೋಷ್ಠಿಗಳಿಗೂ ಶಾಲಾ ಮಕ್ಕಳೇ ಪ್ರೇಕ್ಷಕರಾದರು. ಪುಸ್ತಕ ಮಳಿಗೆಗೆ ತೆರಳಲೂ ಜನರ ನಿರಾಸಕ್ತಿ ಎದ್ದು ಕಾಣು ತ್ತಿತ್ತು. ಬೆಂಗಳೂರು ಹಾಗೂ ಮೈಸೂರಿನಿಂದ ಬಂದಿದ್ದ ಪುಸ್ತಕ ವ್ಯಾಪಾರಿಗಳು ನಿರಾಶರಾಗಿ ಹಿಂದಿರುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.