ಆಲಮಟ್ಟಿ (ನಿಡಗುಂದಿ): ಇಲ್ಲಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ಕೃಷ್ಣಾತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಅರ್ಪಿಸಿ ಮಾತನಾಡಿದ ಸಂತ್ರಸ್ತ ಮುಖಂಡ ಗೋಪಾಲ ವಡ್ಡರ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾಧಿತಗೊಂಡಿರುವ ಸುಮಾರು 20 ಕ್ಕೂ ಅಧಿಕ ಗ್ರಾಮಗಳ ಕೇಂದ್ರ ಸ್ಥಾನವಾಗಿ ರುವ ಆಲಮಟ್ಟಿಗೆ ಸಂತ್ರಸ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಹಿಂದೆಯೇ ಮಂಜೂರಾಗಿದ್ದ ಪದವಿ ವಿದ್ಯಾಲಯ ವನ್ನು ಶೀಘ್ರ ಆರಂಭಿಸಬೇಕು. ಆಲಮಟ್ಟಿ ಗ್ರಾಮವನ್ನು ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೇಗೇರಿಸಬೇಕು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕರೆಯಲಾಗುತ್ತಿರುವ ವಿವಿಧ ಕಾಮಗಾರಿ ಗಳ ಟೆಂಡರುಗಳಲ್ಲಿ ಯೋಜನಾ ನಿರಾಶ್ರಿತ ಗುತ್ತಿಗೆದಾರರಿಗೆ ಶೇ 50ರಷ್ಟು ಮೀಸಲಿಡಬೇಕು, ಕೆಬಿ ಜೆನ್ಎಲ್ ವತಿಯಿಂದ ಕರೆಯಲಾಗುತ್ತಿ ರುವ ₹ 5 ಲಕ್ಷ ದೊಳಗಿನ ಕಾಮಗಾರಿಗಳನ್ನು ಇ– ಟೆಂಡರ್ ಬಿಟ್ಟು ಈ ಹಿಂದೆ ಇದ್ದ ಮ್ಯಾನ್ಯುವೆಲ್ ಪದ್ಧತಿ ಜಾರಿಗೆ ತರಬೇಕು ಎಂದರು.
ಮುಳುಗಡೆ ನಿರಾಶ್ರಿತರಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯನ್ನು ಮುಂದುವರಿಸಬೇಕು, ಯೋಜನಾ ನಿರಾಶ್ರಿತರ ಆರ್ಥಿಕ ಮಟ್ಟ ಸುಧಾರಿಸಲು ಪುನರ್ವಸತಿ ಮಂಡಳಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿ.ಸಿ. ಮುತ್ತಲದಿನ್ನಿ, ಗಿರೀಶ ಮರೋಳ, ಶಂಕರ ಜಲ್ಲಿ, ಅಂದಾನೆಪ್ಪ ಮುಷ್ಠಿಗೇರಿ, ಮಂಜುನಾಥ ಹಿರೇಮಠ, ಯಲ್ಲಪ್ಪ ಜಟ್ಟಗಿ, ಜಕ್ಕಪ್ಪ ಮಾಗಿ, ಎಂ.ಕೆ.ಮಡಿವಾಳರ, ಎಸ್.ಎಂ. ದೊಡ್ಡೆನ್ನವರ ಮೊದಲಾದವರಿದ್ದರು.