ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬೇಕು–ಬೇಡ ಚರ್ಚೆ ಕಾವೇರುತ್ತಿರುವ ನಡುವೆಯೇ ತಮಿಳು ಚಿತ್ರ 'ಎನ್ನೈ ಅರಿಂದಾಲ್' ಕನ್ನಡಕ್ಕೆ ಡಬ್ ಆಗಿ ‘ಸತ್ಯದೇವ್ IPS’ ಹೆಸರಲ್ಲಿ ತೆರೆಕಂಡಿದೆ.
ಡಬ್ಬಿಂಗ್ಗೆ ಅವಕಾಶ ಕೊಡಬೇಕೆಂದು CCI ನಲ್ಲಿ ತೀರ್ಪು ಬಂದ ನಂತರ ‘ಸತ್ಯದೇವ್ IPS’ ಸಿನಿಮಾ ತೆರೆಗೆ ಬರುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಡಬ್ಬಿಂಗ್ ಬೇಕು ಮತ್ತು ಡಬ್ಬಿಂಗ್ ಬೇಡ ಎಂಬ ಚರ್ಚೆ ಮತ್ತೆ ಶುರುವಾಗಿದೆ.
ಪರಭಾಷಾ ಡಬ್ಬಿಂಗ್ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆದರೆ ಅಂಥ ಸಿನಿಮಾಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲೂ ಹಿಂಜರಿಯುವುದಿಲ್ಲ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತ ಡಬ್ಬಿಂಗ್ ವಿರೋಧಿಗಳ ತಂತ್ರಕ್ಕೆ ಮಣಿಯುವುದಿಲ್ಲ. ಏನೇ ಆದರೂ ನಾವು ಸಿನಿಮಾ ಬಿಡುಗಡೆ ಮಾಡಿಯೇ ತೀರುತ್ತೇವೆ’ ಎಂದಿದ್ದರು ಸತ್ಯದೇವ್ ಐಪಿಎಸ್’ ಚಿತ್ರದ ನಿರ್ಮಾಪಕ ಜಿ. ಕೃಷ್ಣಮೂರ್ತಿ.
ಡಬ್ಬಿಂಗ್ ಯಾಕೆ ಬೇಕು?
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ಗೆ ಅವಕಾಶ ನೀಡಬೇಕು, ಇದರಿಂದ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಲ್ಲೇ ನೋಡುವ ಅವಕಾಶ ಪ್ರೇಕ್ಷಕನಿಗೆ ಸಿಗುತ್ತದೆ ಎಂಬುದು ಡಬ್ಬಿಂಗ್ ಪರ ವಾದ.
ಸಾಮಾಜಿಕ ತಾಣದಲ್ಲಿ ಡಬ್ಬಿಂಗ್ ಪರ ದನಿಗಳು ಹೀಗಿವೆ
ಡಬ್ಬಿಂಗ್ ನಿಷೇಧದ ಫಲಾನುಭವಿಗಳು ಮಾತ್ರ ಅದನ್ನು ವಿರೋಧಿಸುತ್ತಿದ್ದಾರೆ. ನಾನಂತೂ ಸಾಮಾನ್ಯ ಕನ್ನಡಿಗನ ಪರ. ಜಗತ್ತಿನ ಎಲ್ಲ ಸಂಗತಿಗಳೂ ಕನ್ನಡದ ಮೂಲಕವೇ ನಮಗೆ ಸಿಗಲಿ ಎನ್ನುವವನು. ಅದನ್ನು ಜೀರ್ಣಿಸಿಕೊಂಡು ಹುಲುಸಾಗಿ ಬೆಳೆವ ಕನ್ನಡ ಸೃಜನಶೀಲ ಶಕ್ತಿಯ ಬಗ್ಗೆ ನನಗೆ ನಂಬಿಕೆಯಿದೆ. ಗೋಡೆ ಕಟ್ಟಿಕೊಂಡು ಹುಸಿ ಸುರಕ್ಷತೆಯ ಭಾವ ಅನುಭವಿಸುವುದಕ್ಕಿಂತಲೂ, ಬಯಲಲ್ಲಿ ಧೈರ್ಯವಾಗಿ ಅಡ್ಡಾಡುವ ಮನೋಭಾವ ನಮ್ಮದಾಗಿರಲಿ
-ವಸುದೇಂದ್ರ, ಸಾಹಿತಿ
ಡಬ್ಬಿಂಗ್ ಬೇಡ ಎನ್ನುವವರ ವಾದ ಹೀಗಿದೆ
ಪರಭಾಷಾ ಡಬ್ಬಿಂಗ್ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆದರೆ ಅಂಥ ಸಿನಿಮಾಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲೂ ಹಿಂಜರಿಯುವುದಿಲ್ಲ ಎಂದಿದ್ದಾರೆ ಜಗ್ಗೇಶ್. ‘ಕನ್ನಡ ಚಿತ್ರರಂಗ ಉಳಿಯಬೇಕು. ಅದಕ್ಕಾಗಿ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಜೈಲಿಗೆ ಹೋಗಲೂ ಸಿದ್ಧ’. ‘ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆದರೆ ಸಂಸ್ಕೃತಿ, ಜ್ಞಾನದ ಬೆಳವಣಿಗೆ ಆಗುತ್ತದೆ ಎಂಬುದೆಲ್ಲ ಸುಳ್ಳು’. ‘ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ಮುಂದಾಗಿರುವವರು ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಯಾವ ಪ್ರಯತ್ನ ಕೈಗೊಂಡಿದ್ದಾರೆ’?
ಕಣ್ಣುಬಿಟ್ಟುಓದಿ ಕನ್ನಡದಧಣಿಯ ಕನ್ನಡಪ್ರೇಮದ ಪತ್ರ! ಇಂಥ ಮಹನೀಯನ ಕಾಲಬುಡದಲ್ಲಿ ಬೆಳೆದವನು ನಾನು! ಎಲ್ಲರು ಸಾಯುತ್ತೇವೆ ಒಂದುದಿನ!ಸಾಯೋಣ ಅಮ್ಮನ ಭಾಷೆಗಾಗಿ ಒಂದುದಿನ! pic.twitter.com/eaYHQ4wreF
— ನವರಸನಾಯಕ ಜಗ್ಗೇಶ್ (@Jaggesh2) March 3, 2017
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.