* ಹಿಪ್ಪಲಿಯ ಕಷಾಯಕ್ಕೆ ಕಲ್ಲುಪ್ಪು ಬೆರೆಸಿ ಕುಡಿದರೆ ಮೂಗು ಕಟ್ಟುವುದು, ಕೆಮ್ಮು ಶಮನವಾಗುವುದು. ತುಲಸಿ, ಲವಂಗ, ಒಣಶುಂಠಿ, ಜೇನಿನೊಂದಿಗೆ ಅದರಿಂದ ತಯಾರಿಸಿದ ಕಷಾಯವು ಹಲವು ಬಗೆಯ ಕೆಮ್ಮುಗಳಿಗೆ ರಾಮಬಾಣವೂ ಹೌದು. ಬದನೆ ಎಲೆಯ ರಸ ಮತ್ತು ಜೇನಿನೊಂದಿಗೆ ಹಿಪ್ಪಲಿಯ ಹುಡಿ ಬೆರೆಸಿ ಕುಡಿದರೆ ದೀರ್ಘಕಾಲದ ಕೆಮ್ಮು ಪರಿಹಾರವಾಗುವುದು. ಹಿಪ್ಪಲಿಯ ಹುಡಿ, ಸೈಂದುಪ್ಪು, ತುಪ್ಪಗಳ ಮಿಶ್ರಣವೂ ಕೆಮ್ಮಿಗೆ ಮದ್ದೆನಿಸಿದೆ. ಬಿಳಿಗಾರದ ಅರಳಿನ ಹುಡಿ ಮತ್ತು ಹಿಪ್ಪಲಿಯ ಹುಡಿಯನ್ನು ಜೇನಿನಲ್ಲಿ ಕಲಸಿ ನೆಕ್ಕಿದರೆ ಕೆಮ್ಮು ಗುಣವಾಗುತ್ತದೆ. ಬೆಲ್ಲ ಮತ್ತು ಹುರಿದ ಹಿಪ್ಪಲಿಯ ಹುಡಿಯ ಸೇವನೆ ಅಸ್ತಮಾ, ಹೃದಯದ ತೊಂದರೆಗಳು, ಕರುಳಿನ ಹುಳಗಳಿಗೂ ಮದ್ದಾಗುತ್ತದೆ.
* ಗಂಟಲಿನಲ್ಲಿ ಕಫ ಕಟ್ಟಿದ್ದರೆ ಅಣಿಲೆಕಾಯಿ, ಹಿಪ್ಪಲಿ, ಕಾಳುಮೆಣಸುಗಳ ಸಮಾಂಶ ಚೂರ್ಣವನ್ನು ಜೇನಿನಲ್ಲಿ ಕಲಸಿ ನೆಕ್ಕಬೇಕು. ಹಿಪ್ಪಲಿ, ಜೀರಿಗೆ, ಯಾಲಕ್ಕಿ, ಒಣಶುಂಠಿ, ಕಾಳುಮೆಣಸುಗಳ ಸಮಾಂಶ ಚೂರ್ಣದಲ್ಲಿ ಸಕ್ಕರೆ ಸೇರಿಸಿ ಸೇವಿಸುವುದು ಉಬ್ಬಸವನ್ನು ತಡೆಯುತ್ತದೆ. ಮಲೇರಿಯ, ಟೈಫಾಯಿಡ್, ಬಿಟ್ಟು ಬರುವ ಜ್ವರಗಳಿಗೂ ಹಿಪ್ಪಲಿಯ ಕಷಾಯ ಚಿಕಿತ್ಸೆಯಾಗುತ್ತದೆ. ಕಾಮಾಲೆ, ಥೈರಾಯ್ಡ್ ನೋವು, ಅಗ್ನಿಮಾಂದ್ಯ, ಗ್ಯಾಸ್ಟ್ರಿಕ್ ಕೂಡ ಅದರ ಮುಂದೆ ಮಣಿಯುತ್ತದೆ. ಹಿಪ್ಪಲಿಯ ಗಿಡದ ಬೇರಿನ ಕಷಾಯ ಮಾಡಿ ಅದಕ್ಕೆ ಹಿಪ್ಪಲಿ ಹುಡಿ ಬೆರೆಸಿ ಕುಡಿದರೆ ಗುಲ್ಮ, ಯಕೃತ್ ರೋಗಗಳು, ಕಟಿವಾಯು, ನಾನಾ ಬಗೆಯ ಸೋಂಕುಗಳಿಗೂ ಪರಿಣಾಮಕರವಾಗಿದೆ.
* ಅಪಸ್ಮಾರ ರೋಗಿಗಳು ಮತ್ತು ನಿದ್ರಾಹೀನತೆಯಿರುವವರು ಮಲಗುವ ಮೊದಲು ಬಿಸಿ ಹಾಲಿನಲ್ಲಿ ಹಿಪ್ಪಲಿಯ ಚೂರ್ಣವನ್ನು ಕದಡಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಜ್ಞಾಪಕಶಕ್ತಿಯನ್ನು ವರ್ಧಿಸಿ ಮೆದುಳಿಗೆ ಬಲದಾಯಕವೂ ಹೌದು.
* ಲಿಂಬೆರಸ ಮತ್ತು ಗಂಧದೆಣ್ಣೆಯೊಂದಿಗೆ ಹಿಪ್ಪಲಿಯ ಹುಡಿಯನ್ನು ಬೆರೆಸಿ ಹಚ್ಚಿದರೆ ಸೋರಿಯಾಸಿಸ್, ಚರ್ಮದ ಉರಿಯೂತ, ನೋವುಗಳು ಶಮನವಾಗುತ್ತವೆ.
ಯಾವ ಬಗೆಯ ರೋಗದ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ವೈದ್ಯರನ್ನು ಕಾಣಬೇಕು.