ಬಾದಾಮಿ: ಅಪಘಾತಗಳು ಸಂಭವಿಸಿದಾಗ ಮನುಷ್ಯನಿಗೆ ರಕ್ತದ ಅವಶ್ಯಕತೆ ಇರುತ್ತದೆ ಎಂದು ನ್ಯಾಯಾಧೀಶೆ ಪದ್ಮಶ್ರೀ ಮುನ್ನೊಳ್ಳಿ ಹೇಳಿದರು.
ಇಲ್ಲಿನ ನ್ಯಾಯಾಲಯದ ಸಭಾಭವನದಲ್ಲಿ ಶುಕ್ರವಾರ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಐಎಂಎ, ಸರ್ಕಾರಿ ಪ್ರಥಮ ಕಾಲೇಜು, ರೆಡ್ ಕ್ರಾಸ್, ರೆಡ್ ರಿಬ್ಬನ್ ಘಟಕ ಮತ್ತು ಆರೋಗ್ಯ ಇಲಾಖೆ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ಹೆಚ್ಚಾಗುತ್ತದೆ. ರಕ್ತದಾನ ಮಾಡಲು ಭಯಪಡಬೇಡಿ ಎಂದು ನ್ಯಾಯಾಧೀಶ ಹರೀಶ್ ಹೇಳಿದರು.
ದೇಶದಲ್ಲಿ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಅಂದಾಜು 5 ಕೋಟಿ ಬಾಟಲಿ ರಕ್ತದ ಅವಶ್ಯಕತೆ ಇದೆ. ಆದರೆ ಲಭ್ಯವಾಗುವುದು ಕೇವಲ 2.5 ಕೋಟಿ ಬಾಟಲಿ ರಕ್ತ ಮಾತ್ರ. ದೇಶದಲ್ಲಿ ಶೇ 50ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಒಬ್ಬರು ರಕ್ತ ದಾನ ಮಾಡಿದರೆ ಮೂರು ಜನರಿಗೆ ಉಪಯೋಗವಾಗುತ್ತಿದೆ ಎಂದು ಡಾ.ಕಿರಣಕುಮಾರ ಕುಳಗೇರಿ ಹೇಳಿದರು.
20 ಜನ ವಕೀಲರು ಮತ್ತು 30 ಜನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. 50ನೇ ಬಾರಿಗೆ ರಕ್ತದಾನ ಮಾಡಿದ ವೀರಪುಲಿಕೇಶಿ ಕಾಲೇಜಿನ ನೌಕರ ಬಸವರಾಜ ಕೊಣ್ಣೂರ ಅವರನ್ನು ತಹಶೀಲ್ದಾರ್ ಎಸ್. ರವಿಚಂದ್ರ ಸನ್ಮಾನಿಸಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಶಿವಪ್ಪಯ್ಯನಮಠ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಕವಿತಾ ಶಿವನಾಯ್ಕರ್, ಡಾ.ಶಾಂತಗೌಡ, ವಕೀಲರದಾರ ಎನ್.ಬಿ.ಹೊಸಮನೆ, ವಿ.ಕೆ.ಧಾರವಾಡಕರ, ವಕೀಲರ ಸಂಘದ ಉಪಾಧ್ಯಕ್ಷ ಎನ್.ಎಸ್.ಕತ್ತಿಕೈ, ಅಭಿಯೋಜಕರಾದ ಎಂ.ಎಸ್. ಪೋಳ, ಎಸ್.ಪಿ. ನಾಯ್ಕರ್, ಪ್ರಾಚಾರ್ಯ ಜಿ.ಜಿ. ಹಿರೇಮಠ ಇದ್ದರು.