ಕೆಂಭಾವಿ: ಪಟ್ಟಣದ ತೊಗರಿ ಕೇಂದ್ರದಲ್ಲಿ ಕೆಲಸಮಾಡುತ್ತಿದ್ದ ಹಮಾಲರೊಬ್ಬರ ಮೇಲೆ ಶುಕ್ರವಾರ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಅದನ್ನು ಖಂಡಿಸಿ ಎಪಿಎಂಸಿ ಹಮಾಲರು ಉಪತಹಶೀಲ್ದಾರ್ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಎಂದಿನಂತೆ ಶುಕ್ರವಾರ ಬೆಳಿಗ್ಗೆ ಗೋದಾಮಿನಲ್ಲಿ ತೊಗರಿ ಚೀಲ ತೂಕ ಮಾಡುತ್ತಿದ್ದ ಹಣಮಂತರಾಯ ಎಂಬುವರ ಮೇಲೆ ದೂರದಿಂದ ಬಂದ ಕಲ್ಲು ತಲೆಗೆ ಬಡಿದು ಸ್ಥಳದಲ್ಲೆ ಕುಸಿದು ಬಿದ್ದನು. ಇದನ್ನು ಗಮನಿಸಿದ ಇನ್ನುಳಿದ ಹಮಾಲರು ತಕ್ಷಣವೆ ಸಮುದಾಯ ಆರೋಗ್ಯಕ್ಕೆ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಉಪತಹಸೀಲ್ದಾರ ಕಚೇರಿ ಮುಂದೆ ಮಿಂಚಿನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಹಮಾಲರ ಸಂಘದ ಅಧ್ಯಕ್ಷ ಬಸವರಾಜ, ಹಗಲು ರಾತ್ರಿ ಎನ್ನದೆ ರೈತರ ತೊಗರಿ ಚೀಲಗಳನ್ನು ನಾವು ತೂಕ ಮಾಡುತ್ತಿದ್ದು ಮೇಲಿಂದ ಮೇಲೆ ಹಮಾಲರ ಮೇಲೆ ಹಲ್ಲೆ ಜರುಗುತ್ತಿವೆ ಇದಕ್ಕೆ ಎಪಿಎಮ್ ಸಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷವೆ ಕಾರಣವಾಗಿದ್ದು ಸ್ಥಳದಲ್ಲಿ ಅಧಿಕಾರಿಗಳು ಬರುವವರೆಗೆ ಎಲ್ಲ ತೊಗರಿ ಕೇಂದ್ರಗಳನ್ನು ಬಂದ ಮಾಡಿ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು.
ಉಪತಹಸೀಲ್ದಾರ ಆರ್. ಆನಂದ ಹಾಗೂ ಪಿಎಸ್ಐ ಅರುಣಕುಮಾರ ನಡೆಸಿದ ಸಂಧಾನ ವಿಫಲವಾಗಿ ಪ್ರತಿಭಟನೆ ಮುಂದುವರೆಯಿತು. ಯಮನಪ್ಪ, ರಾವುತರಾಯ, ಶಿವು ಮಲ್ಲಿಬಾವಿ, ಸಂಗಣ್ಣ, ಶರಣಪ್ಪ ಗುಬ್ಬೆವಾಡ, ಮುದಕಪ್ಪ, ಸೇರಿದಂತೆ ನೂರಾರು ಹಮಾಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.