ಬೆಂಗಳೂರು: ಊಟ ಕೊಡಿಸುವುದಾಗಿ ಹೇಳಿ 13 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ದುಷ್ಕರ್ಮಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಸಂಜಯನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಬಾಲಕಿಯು ಎಂಟನೇ ತರಗತಿ ಓದುತ್ತಿದ್ದು, ಆಕೆಯ ಪೋಷಕರು ಸಂಜಯನಗರದ ಮಾರುಕಟ್ಟೆ ಪ್ರದೇಶದ ಫುಟ್ಪಾತ್ನಲ್ಲಿ ಹಣ್ಣು–ತರಕಾರಿ ಮಾರಾಟ ಮಾಡುತ್ತಾರೆ. ಅದೇ ಸ್ಥಳಕ್ಕೆ ಹತ್ತಿರದಲ್ಲೇ ಮನೆ ಮಾಡಿಕೊಂಡು ಈ ಕುಟುಂಬ ವಾಸವಿದೆ.
ಫೆ. 24ರಂದು ಸಂಜೆ ಬಾಲಕಿಯು ಶಾಲೆಯಿಂದ ಮನೆಗೆ ಬಂದಿದ್ದಳು. ಆಗ ಮನೆಯ ಬಳಿಯಿದ್ದ ದುಷ್ಕರ್ಮಿ, ‘ಮದುವೆ ಮನೆಯಲ್ಲಿ ಊಟ ಉಳಿದಿದೆ. ಪಾತ್ರೆ ತೆಗೆದುಕೊಂಡು ಬಂದರೆ ಕೊಡಿಸುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿ ಬಾಲಕಿಯು ಪಾತ್ರೆ ಸಮೇತ ಆತನೊಂದಿಗೆ ಬೈಕ್ನಲ್ಲಿ ಹೋಗಿದ್ದಳು.
ರಾಜಾನುಕುಂಟೆಯ ಅರಣ್ಯ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದಿದ್ದ ದುಷ್ಕರ್ಮಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿ 9ರ ಸುಮಾರಿಗೆ ಬಾಲಕಿಯನ್ನು ಮನೆಯ ಸಮೀಪ ಬಿಟ್ಟು ಹೊರಟುಹೋಗಿದ್ದಾನೆ.
ಘಟನೆಯಿಂದ ಹೆದರಿದ್ದ ಬಾಲಕಿಯು ಮನೆಯವರಿಗೆ ಯಾವುದೇ ವಿಷಯ ತಿಳಿಸಿರಲಿಲ್ಲ. ಶುಕ್ರವಾರ (ಮಾ. 3) ಬೆಳಿಗ್ಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ವಿಷಯ ಬೆಳಕಿಗೆ ಬಂದಿದೆ.
‘ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಾಲಕಿಯ ಹೇಳಿಕೆ ಪಡೆದು ಆರೋಪಿಯನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಸಂಜಯನಗರ ಪೊಲೀಸರು ತಿಳಿಸಿದರು.