ಬೆಂಗಳೂರು: ಪೂರ್ವ ಉಪ ವಿಭಾಗದ ಪುಲಕೇಶಿನಗರ, ಬಾಣಸವಾಡಿ, ಇಂದಿರಾನಗರ ಹಾಗೂ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ 11 ಯುವಕರನ್ನು ಬಂಧಿಸಲಾಗಿದೆ.
ಕೆ.ಜಿ.ಹಳ್ಳಿಯ ನವೀದ್ ಅಹಮ್ಮದ್ (18), ಗಾಂಧಿನಗರದ ಆಸೀಫ್ (22), ನಾಗವಾರ ಮುಖ್ಯರಸ್ತೆಯ ಅಜೀಂ ಮುಲ್ಲಾ (22), ರಾಚೇನಹಳ್ಳಿಯ ಶೇಕ್ ಮಸೂದ್ (23), ಗಾಂಧಿನಗರದ ಸಯ್ಯದ್ ಮುಫೀದ್ (24), ಹಲಸೂರಿನ ಹೊಯ್ಸಳನಗರದ ವಿಘ್ನೇಶ್ (20), ಪಂಕಜ್, ಅಬ್ದುಲ್ ರೆಹಮಾನ್, ಸಾಯಿತೇಜ, ಕಿಶೋರ್ ಹಾಗೂ ಕಿರಣ್ ಬಂಧಿತರು.
‘ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಬೈಕ್ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ 28 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಪುಲಕೇಶಿನಗರ ವ್ಯಾಪ್ತಿಯಲ್ಲಿ 17, ಕೆ.ಆರ್.ಪುರ 5, ಬಾಣಸವಾಡಿ, ಇಂದಿರಾನಗರದಲ್ಲಿ ತಲಾ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
‘ಬೈಕ್ಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡಿಕೊಡುತ್ತಿದ್ದ ಕೆ.ಜಿ.ಹಳ್ಳಿಯ ಮಿಸ್ಬಾ ಬೈಕ್ ಗ್ಯಾರೇಜ್ ಮಾಲೀಕ ಸಯ್ಯದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.