ಧಾರವಾಡ: ಬದಲಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ಹಬ್ಬಗಳು ತಮ್ಮ ವಿನ್ಯಾಸದಲ್ಲಿ ಬದಲಾವಣೆ ತಂದುಕೊಂಡಿವೆ.
ಆಧುನಿಕ ಸಂಸ್ಕೃತಿ ಪ್ರಭಾವದಿಂದ ಹೋಳಿ ಹಬ್ಬಕ್ಕಿಂತ ಹದಿನೈದು ದಿನ ಮೊದಲೇ ಆರಂಭಗೊಳ್ಳುತ್ತಿದ್ದ ಹಲಿಗೆಯ ಸದ್ದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.
ಕಳೆದು ಹೋಗುತ್ತಿರುವ ಸಾಂಪ್ರದಾಯಿಕ ಶೈಲಿಯ ಹಲಗೆ ಬಾರಿಸುವ ಪದ್ಧತಿಯನ್ನು ಉಳಿಸುವ ಹಿನ್ನೆಲೆಯಲ್ಲಿ ಇಲ್ಲಿನ ಹೊಸಯೆಲ್ಲಾಪುರ ಕಾಮನಕಟ್ಟೆಯ ಸಮಾನ ಮನಸ್ಕರ ಗೆಳೆಯರ ಬಳಗದ ಸದಸ್ಯರು ಭಾನುವಾರ ಹಲಗೆ ಹಬ್ಬ ಆಚರಿಸಿದರು.
ಹೋಳಿ ಹಬ್ಬದ ಅಂಗವಾಗಿ ನಗರದ ಕಾಮನಕಟ್ಟಿ ಪ್ಯಾಟಿ ಓಣಿಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಬಣ್ಣ ಎರಚುವ ಮೂಲಕ ಸಾಂಕೇತಿಕವಾಗಿ ಹಲಗೆ ಹಬ್ಬಕ್ಕೆ ಚಾಲನೆ ನೀಡಿದರು.
ನೂರಾರು ಸಂಖ್ಯೆಯಲ್ಲಿ ಹಲಿಗೆಗಳೊಂದಿಗೆ ಜಮಾಯಿಸಿದ್ದ ಯುವಕರು ಭೂಸಪ್ಪ ಚೌಕ, ರಾಮದೇವರಗುಡಿ, ಟಿಕಾರೆ ರಸ್ತೆ, ವಿವೇಕಾನಂದ ವೃತ್ತ, ಸುಭಾಸ ರಸ್ತೆ, ಗಾಂಧಿಚೌಕ, ರವಿವಾರ ಪೇಟೆ, ಮಟ್ಟಿಪರಪ್ಪನ ಕೂಟ ಮೂಲಕ ಚರಂತಿಮಠ ಗಾರ್ಡನ್ ಸಿದ್ಧಿ ವಿನಾಯಕ ದೇವಸ್ಥಾನದವರೆಗೆ ವೈವಿಧ್ಯಮಯವಾಗಿ ಹಲಿಗೆ ಬಾರಿಸುತ್ತ ಮೆರವಣಿಗೆಯಲ್ಲಿ ತೆರಳಿದರು. ಬೆಳಿಗ್ಗೆಯಿಂದ ಸಂಜೆವರೆಗೂ ನಗರದ ಯುವಕರು ಹಲಗೆ ಬಾರಿಸುವ ಮೂಲಕ ಹೋಳಿ ಹಬ್ಬವನ್ನು ಸ್ವಾಗತಿಸಿದರು.
ಹಲಿಗೆ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಮಲ್ಲಿಕಾರ್ಜು ಸ್ವಾಮೀಜಿ, ‘ಹಲಿಗೆ ಬಾರಿಸುವುದು ಕಾಮಣ್ಣನ ಹಬ್ಬದ ವಿಶೇಷ. ಹಲವು ಲಯಗಳಲ್ಲಿ ಹಲಿಗೆ ಬಾರಿಸುವುದು ಒಂದು ವಿಶಿಷ್ಠ ಕಲೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಕರ್ಕಶ ಶಬ್ದ ಹೊರಹೊಮ್ಮಿಸುವ ವಾದ್ಯಗಳನ್ನು ಹೋಳಿ ಹುಣ್ಣಿಮೆಯಲ್ಲಿ ಬಳಸುತ್ತಿರುವುದು ಬೇಸರದ ಸಂಗತಿ. ಆದರೆ ಸಾಂಸ್ಕೃತಿಕ ನಗರಿಯಲ್ಲಿ ಯುವಕರು ಸೇರಿಕೊಂಡು ನಮ್ಮ ಪರಂಪರೆಯ ಭಾಗವಾಗಿರುವ ಹಲಿಗೆ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ಎಂದರು.
ಹಲಿಗೆ ಹಬ್ಬದ ಆಯೋಜಕ, ಪಾಲಿಕೆ ಸದಸ್ಯ ಶಂಕರ ಶೆಳಕೆ ಮಾತನಾಡಿ, ‘2013 ರಲ್ಲಿ ಈ ಹಬ್ಬ ಆರಂಭಿಸಲಾಗಿದೆ. ಈಗ ಧಾರವಾಡದ ವಿವಿಧ ಪ್ರದೇಶಗಳ ಯುವಕರು ಈ ಹಬ್ಬದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸುವ ಈ ಹಬ್ಬ ಸಮಾಜದಲ್ಲಿ ಸಹೋತದರತ್ವ, ಭಾವೈಕ್ಯ ಮೂಡಿಸುವ ಕೆಲಸ ಮಾಡುತ್ತದೆ ಎಂದರು. ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ಪೂರ್ಣಾ ಪಾಟೀಲ, ಸಂಜಯ ಕಪಟಕರ, ನಿರ್ಮಲಾ ಜವಳಿ, ಮಹೇಶ ಟೆಂಗಿನಕಾಯಿ, ಸೀಮಾ ಮಸೂತಿ, ಮಹೇಶ ಸುಲಾಖೆ, ರಾಕೇಶ ನಾಝರೆ, ಗಣೇಶ ಮುಧೋಳೆ, ಶ್ರೀನಿವಾಸ ಪಾಟೀಲ, ರಾಮಚಂದ್ರ, ಶಕ್ತಿ ಹಿರೇಮಠ, ವಿನೋದ ಜಾಧವ, ಕಿರಣ ಟೊಂಗಿ ಇದ್ದರು.