ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಾರ್ಯಗಳಿಂದ ಸುಕ್ರಿಗೆ ಪದ್ಮಶ್ರೀ

ಅಭಿನಂದನಾ ಕಾರ್ಯಕ್ರಮದಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ
Last Updated 7 ಮಾರ್ಚ್ 2017, 5:40 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಸುಕ್ರಿ ಅವರ ವಿಶಿಷ್ಟತೆ ಹಾಡುಗಾರಿಕೆಗೆ ಸೀಮಿತವಲ್ಲ. ಅವರು ಮಾಡಿದ ಸಾಮಾಜಿಕ ಕಾರ್ಯಗಳೂ ಅಷ್ಟೇ ಮುಖ್ಯ. ಅದಕ್ಕಾಗಿಯೇ ಸರ್ಕಾರ ಪದ್ಮಶ್ರೀ ಗೌರವ ನೀಡಿದೆ’ ಎಂದು ಕಬೀರಾ ನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
 
ಮಹಾರಾಣಿ ಕಾಲೇಜಿನಲ್ಲಿ ಸೋಮವಾರ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮುಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
 
‘ಹಿರಿತೆರೆ ಹಾಗೂ ಕಿರುತೆರೆಗಳ ಹಾವಳಿಯ ನಡುವೆಯೂ ಸುಕ್ರಿ ಅವರ ಜನಪದ ಹಾಡನ್ನು ಕೇಳುವವರು ನಮ್ಮ ನಡುವೆ  ಇದ್ದಾರೆ. ಅಜ್ಜಿಯ ಹಾಡುಗಳಲ್ಲಿ ಬದುಕಿನ ಅರ್ಥವಿದೆ.  ಜನಪದಕ್ಕೆ ಭಾವ ತುಂಬಿದಾಗ ಮನಸ್ಸನ್ನು ಮುಟ್ಟುತ್ತದೆ’ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ, ಸುಕ್ರಿಬೊಮ್ಮುಗೌಡ ಅವರ ಸಾಧನೆ ಗುರುತಿಸಿ ಸರ್ಕಾರಿ ದೇಶದ ನಾಲ್ಕನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮಶ್ರೀ  ನೀಡಿದೆ ಎಂದರು. 
 
ಉಡುಪಿಯ ಹಾಸ್ಯ ಸಾಹಿತಿ ಸಂಧ್ಯಾ ಶೆಣ್ಯೆ ಮಾತನಾಡಿ, ‘ಪ್ರತಿಭೆ ಇದ್ದರೆ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಹಾಡುಹಕ್ಕಿ ಸುಕ್ರಿಬೊಮ್ಮುಗೌಡ ಅವರೇ ಸಾಕ್ಷಿ’ ಎಂದು ಅಭಿಪ್ರಾಯಪಟ್ಟರು.
 
ಮದಕರಿನಾಯಕ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ಬೋರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಕೋಗಿಲೆ ಸುಕ್ರಿಬೊಮ್ಮಗೌಡ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯೂ ಲಭಿಸಲಿ. ಅವರು ಹಾಡಿರುವ ಜನಪದ ಹಾಡುಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಲು ನೆರವು ನೀಡಲಾಗುವುದು ಎಂದು ತಿಳಿಸಿದರು. 
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್‌, ಉಪ ಪ್ರಾಂಶುಪಾಲ ರಾಜಣ್ಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್ ಪ್ರಸಾದ್, ಉಪಾಧ್ಯಕ್ಷ ಡಾ.ರಹಮತ್‌ವುಲ್ಲಾ, ಖಜಾಂಚಿ ಅನ್ವರ್‌ ಪಾಷಾ, ದಾದಾಪೀರ್ ಇತರರು ಇದ್ದರು. ಜಯಣ್ಣ ಪ್ರಾರ್ಥಿಸಿದರು. ಓ.ಬಿ.ಬಸವರಾಜ್ ಸ್ವಾಗತಿಸಿದರು.
 
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ  ಕಾರ್ಯಕ್ರಮ ಆಯೋಜಿಸಲಾಗಿತ್ತು.
 
* ಯಾವ ಫಲಾಪೇಕ್ಷೆ ಬಯಸದ ಜನಪದ ಹಾಡುಗಾರ್ತಿ, ಹೋರಾಟಗಾರ್ತಿ ಸುಕ್ರಿ ಅವರಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ.
– ಶಿವಲಿಂಗಾನಂದ ಸ್ವಾಮೀಜಿ, ಕಬೀರಾನಂದಾಶ್ರಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT