ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 9ರಂದು ಇಲ್ಲಿನ ಗುರುಭವನದಲ್ಲಿ ನಡೆಯಲಿದ್ದು, ಚಂದೂ ದೇಪಾಪುರ ಅವರು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ತಾಲ್ಲೂಕು ಕಸಾಪ ಅಧ್ಯಕ್ಷ ವೀ.ನಾ. ಚಿದಾನಂದಸ್ವಾಮಿ, ಆ ದಿನ ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಅಧ್ಯಕ್ಷ ರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರ ಲಾಗುವುದು ಎಂದರು.
ಮೆರವಣಿಗೆಯನ್ನು ತಾಲ್ಲೂಕು ಪಂಚಾಯಿತಿ ಅದ್ಯಕ್ಷ ಎಚ್.ಎನ್. ನಟೇಶ್ ಉದ್ಘಾಟಿಸಲಿದ್ದು, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಂಗ ಸ್ವಾಮಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅದೇ ದಿನ ಬೆಳಿಗ್ಗೆ 10.30ಕ್ಕೆ ಗುರು ಭವನ ಸಭಾಂಗಣದಲ್ಲಿ ಸಮ್ಮೇಳನ ವನ್ನು ಸಾಹಿತಿ ನಾಗಭೂಷಣ ಬಸವಾಪುರ ಉದ್ಘಾಟಿಸುವರು. ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಅಧ್ಯಕ್ಷತೆ ವಹಿಸುವರು.
ನಿಟಕಪೂರ್ವ ಸಮ್ಮೇಳನಾಧ್ಯಕ್ಷ ಹೊರೆಯಾಲ ಶಿವಬಸಪ್ಪ ಉಪಸ್ಥಿತರಿರಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಮಹೇಶ್, ತಾ.ಪಂ ಉಪಾಧ್ಯಕ್ಷೆ ರೂಪಾ, ಇಒ ಪುಷ್ಪಾ ಕಮ್ಮಾರ್, ಬಿಇಒ ಸಿ.ಎನ್.ರಾಜು ಭಾಗವಹಿಸುವರು ಎಂದು ಹೇಳಿದರು.
ಮಧ್ಯಾಹ್ನ 12.30ಕ್ಕೆ ಕೃಷಿ ವಿಚಾರ ಗೋಷ್ಠಿಯಲ್ಲಿ ಲೇಖಕ ಚಿನ್ನಸ್ವಾಮಿ ವಡ್ಡಗೆರೆ ‘ಕೃಷಿಯಲ್ಲಿ ವರ್ತಮಾನದ ಆತಂಕಗಳು, ಭರವಸೆಗಳು’ ವಿಷಯ ಕುರಿತು ವಿಚಾರ ಮಂಡಿಸುವರು. ಕೃಷಿ ಚಿಂತಕ ಮಾದೇಶ್ ಉಡಿಗಾಲ ಅಧ್ಯಕ್ಷತೆ ವಹಿಸುವರು.
ಸಂಜೆ 4.30ಕ್ಕೆ ಸಮಾರೋಪ ಸಮಾ ರಂಭ ನಡೆಯಲಿದ್ದು, ರಂಗಕರ್ಮಿ ವೆಂಕಟರಾಜು ಮಾತನಾಡುವರು. ಸಾಹಿತಿ ಮೂಡ್ನಾಕೂಡು, ಬಿಜೆಪಿ ಮುಖಂಡ ಸಿ.ಎಸ್.ನಿರಂಜನಕುಮಾರ್, ಜಿ.ಪಂ ಸದಸ್ಯ ಬಿ.ಕೆ.ಬೋಮ್ಮಯ್ಯ, ರತ್ನಮ್ಮ ಶ್ರೀಕಂಠಪ್ಪ, ಚೆನ್ನಪ್ಪ, ಅಶ್ವಿನಿ ವಿಶ್ವನಾಥ್ ಮುಖ್ಯಅತಿಥಿಯಾಗಿ ಭಾಗವಹಿಸುವರು ಎಂದು ತಿಳಿಸಿದರು.
ತಾಲೂಕು ಘಟಕದ ಉಪಾಧ್ಯಕ್ಷ ಜಿ.ಜಿ.ಮಲ್ಲಿಕಾರ್ಜುನ, ಗೌರವ ಕಾರ್ಯ ದರ್ಶಿ ನಾಗರಾಜ ಶರ್ಮ ಇದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ
ಗುಂಡ್ಲುಪೇಟೆ: 1950ರಲ್ಲಿ ತಾಲೂಕಿನ ದೇಪಾಪುರಗ್ರಾಮದಲ್ಲಿ ಜನಿಸಿದ ಚಂದೂ ದೇಪಾಪುರ ಸ್ನಾತಕೋತ್ತರ ಪದವೀಧರರಾಗಿದ್ದು, ಅಂಚೆ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ತಂದೆ ಬಸಪ್ಪ ಮತ್ತು ತಾಯಿ ಗೌರಮ್ಮ . ಕಥೆ, ಕವನ, ಚುಟುಕು, ಚಿಂತನ ಬರಹಗಳು, ಅಂಕಣಬರಹಗಳು, ವಿವಿಧ ದೈನಿಕ ಮತ್ತು ಸಾಪ್ತಾಹಿಕಗಳಲ್ಲಿ ಪ್ರಕಟವಾಗಿವೆ.
ಹಲವಾರು ಕವಿಗೋಷ್ಠಿ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಅಚ್ಚು ಹಾಕಿಸಿ ಉಚಿತವಾಗಿ ಹಂಚಿದ್ದಾರೆ.