ಉಡುಪಿ: ಪೂರ್ಣಗೊಳ್ಳದ ನಾಲೆಗಳ ಕಾಮಗಾರಿ, ಸ್ವಾಧೀನಪಡಿಸಿಕೊಂಡ ಜಮೀನಿಗೆ ಹಣ ನೀಡಿಲ್ಲ, ಕಾಮಗಾರಿ ವೇಳೆ ಹಾನಿಗೊಳಗಾದ ಮನೆಗಳಿಗೆ ಪರಿಹಾರವಿಲ್ಲ...
ಸೋಮವಾರ ವಾರಾಹಿ ಕಾಮಗಾ ರಿಯ ಖುದ್ದು ವೀಕ್ಷಣೆ ನಡೆಸಿದ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸಮಸ್ಯೆಗಳ ಸಾಕ್ಷಾತ್ ದರ್ಶನವಾಯಿತು.
ವಾರಾಹಿ ಎಡದಂಡೆ ಕಾಲುವೆಯ ಒಂದು ಭಾಗ ಪೂರ್ಣಗೊಂಡು ಉದ್ಘಾಟನೆಯಾದರೂ ಅದರ ಸಂಪೂರ್ಣ ಉಪಯೋಗ ಆ ಭಾಗದ ಜನರಿಗೆ ಸಿಕ್ಕಿಲ್ಲ ಎಂಬ ಸತ್ಯ ಸಹ ಅನಾವರಣವಾಯಿತು. ಮೊಳಹಳ್ಳಿಯಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ ಮಳೆಗಾಲದಲ್ಲಿ ನೆರೆ ಬಂದು ನೀರು ಮನೆ, ಹೊಲ– ಗದ್ದೆ ಮತ್ತು ತೋಟಕ್ಕೆ ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಈ ವರೆಗೆ ಪರಿಹಾರ ನೀಡಿಲ್ಲ ಎಂದು ವತ್ಸಲ ಎಂಬುವರು ದೂರಿದರು.
ಕಾಲುವೆ ಕಾಮಗಾರಿ ಆರಂಭಿಸಿರುವ ಕಾರಣ ಈ ಭಾಗದ ಜನರಿಗೆ ರಸ್ತೆ ಬಂದ್ ಆಗಿದೆ. ಸೇತುವೆಯನ್ನೂ ನಿರ್ಮಾಣ ಮಾಡದ ಕಾರಣ ಜನರು ತೀವ್ರ ತೊಂ ದರೆ ಅನುಭವಿಸುವಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಆ ಭಾಗದ ಜನರು ಮನವಿ ಮಾಡಿದರು.
ವಾರಾಹಿ ಯೋಜನೆಯಿಂದ ಈ ಭಾಗದ ರೈತರಿಗೆ ಉಪಯೋಗ ಆಗಿದೆ ಎಂದು ಸಹ ಕೆಲವರು ಮೆಚ್ಚುಗೆ ವ್ಯಕ್ತಪ ಡಿಸಿದರು. ವಿತರಣಾ ನಾಲೆ ನಿರ್ಮಾಣ ಆಗದಿದ್ದರೂ ಕಾಲುವೆಗೆ ರಂಧ್ರ ಮಾಡು ವ ಮೂಲಕ ಮೊಳಹಳ್ಳಿ ಭಾಗಕ್ಕೆ ನೀರು ನೀಡಿದ್ದಾರೆ. ಇದರಿಂದ ಉಪಯೋಗ ವಾಗಿದೆ ಎಂದು ಹಲವರು ಹೇಳಿದರು.
ಹಾರ್ದಳ್ಳಿ– ಮಂಡಳ್ಳಿ ವರೆಗೆ ಕಾಲುವೆ ಬಂದಿದ್ದರೂ ಕೇವಲ ಐದು ಸೇಂಟ್ಸ್ ಖಾಸಗಿ ಜಮೀನಿನ ಸಮಸ್ಯೆ ಯಿಂದಾಗಿ ಸುಮಾರು 60 ಎಕರೆ ಜಮೀ ನಿಗೆ ನೀರು ತಲುಪಿಲ್ಲ. ಐದು ಸೆಂಟ್ಸ್ ಜಮೀನು ಖಾಸಗಿಯವರಿಗೆ ಸೇರಿದ್ದು ಅವರ ಮನವೊಲಿಸಿ ಕಾಲುವೆ ಮುಂದು ವರಿಸಿದರೆ ಅನುಕೂಲವಾಗುತ್ತದೆ ಎಂದು ಸ್ಥಳೀಯ ಸಂತೋಷ್ ಅವರು ಸಚಿವರಿಗೆ ಮನವಿ ಮಾಡಿದರು.
ಕಾಮಗಾರಿಯ ಮಣ್ಣನ್ನು ಜಮದಗ್ನಿ ಕೆರೆಗೆ ತುಂಬಿದ ಪರಿಣಾಮ ಈ ಭಾಗದ ಜಲ ಮೂಲವೇ ಮುಚ್ಚಿ ಹೋಗಿದೆ. ಕಾಲುವೆ ನೀರು ಸಹ ಬಂದಿಲ್ಲ. ಸಮಸ್ಯೆ ಬಗೆಹರಿಸಿ ಎಂಬುದು ಜೀತ್ಮಕ್ಕಿ ಜನರ ಅಹವಾಲಾಗಿತ್ತು.
ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಪರಿಣಾಮ ಮಧ್ಯದಲ್ಲಿ ರಸ್ತೆ ಬಂದು ಕಾಲುವೆ (ಅಕ್ವಾ ಡಕ್ಟ್) ಕಾಮ ಗಾರಿ ಅಪೂರ್ಣಗೊಂಡಿರುವುದನ್ನು ಕಣ್ಣಾರೆ ಕಂಡ ಪ್ರಮೋದ್ ಮಧ್ವರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂ ಡರು. ಕಾಮಗಾರಿಗೆ ಎದುರಾಗಿರುವ ಅಡಚಣೆಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಬಹುದಿತ್ತಲ್ಲ, ಇದುವರೆಗೂ ಏನು ಮಾಡುತ್ತಿದ್ದೀರಿ? ಎಂದು ರೇಗಿದರು. ಕೂಡಲೇ ಈ ಕಾಮ ಗಾರಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ವಾರಾಹಿ ನೀರಾವರಿ ಯೋಜನೆಯಾ ಗಿದೆ, ಆದರೆ ಇಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಿರುವುದರಿಂದ ಮೂಲ ಉದ್ದೇಶ ಈಡೇರಿಲ್ಲ. ವಿದ್ಯುತ್ ಉತ್ಪಾದ ನೆಗೆ ಬಳಕೆಯಾಗುವ ನೀರು ಸಮುದ್ರ ಸೇರುತ್ತದೆ. ಅದನ್ನು ಮತ್ತೆ ಕಾಲುವೆಗೆ ಹರಿಸಲು ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ರಾಜು ಶೆಟ್ಟಿ ಹಾಕು ಅಶೋಕ ಶೆಟ್ಟಿ ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾ ಪ್ಚಂದ್ರ ಶೆಟ್ಟಿ, ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ಇದ್ದರು.
* ಅರಣ್ಯ, ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಸಮಸ್ಯೆಗಳು ಬಂದಾಗ ಒಟ್ಟಿಗೆ ಕೂತು ಬಗೆಹರಿಸಬೇಕು.
ಪ್ರಮೋದ್ ಮಧ್ವರಾಜ್, ಸಚಿವ