ಉಡುಪಿ: ಅಳಿದುಳಿದ ಜೀವ ಸಂಕುಲವನ್ನು ಸಂರಕ್ಷಿಸುವಲ್ಲಿ ಯುವ ಜನಾಂಗದ ಪಾತ್ರ ಬಹಳ ಪ್ರಮುಖವಾದುದು ಎಂದು ಸೋಮೇಶ್ವರ ವನ್ಯಜೀವಿ ಸಂರಕ್ಷಣಾಧಿಕಾರಿ ತ್ಯಾಗರಾಜ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಹೆಬ್ರಿ ಸಮೀಪದ ಜೊಮ್ಲು ತೀರ್ಥದಲ್ಲಿ ಇತ್ತೀಚೆಗೆ ಏರ್ಪಡಿಸಿದ ಜಿಲ್ಲಾಮಟ್ಟದ ಚಾರಣ ಮತ್ತು ಸ್ವಚ್ಛತಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿಯಲ್ಲಿ ಬದುಕುವ ಹಕ್ಕು ಮನುಷ್ಯನಿದ್ದಷ್ಟೇ, ಇತರ ಜೀವಿಗಳಿಗೂ ಇದೆ. ಆದರೆ, ಮನುಷ್ಯನ ಸ್ವಾರ್ಥದಿಂದಾಗಿ ಅನೇಕ ಜೀವ ಸಂಕುಲ ಕಣ್ಮರೆಯಾಗುತ್ತಿರುವುದು ಮಾತ್ರ ದುರಂತ ಎಂದರು. ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿ, ಶಿಬಿರಾರ್ಥಿಗಳು ನಡೆಸಿದ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿದರು.
ಶಿಬಿರಾಧಿಕಾರಿ ಕೆ. ಉದಯ ಶೆಟ್ಟಿ, ಸಹ ಶಿಬಿರಾಧಿಕಾರಿಗಳಾದ ಡಾ.ಜಯ ರಾಮ್ ಶೆಟ್ಟಿಗಾರ್, ಬಿ.ಡಿ. ಮಂಜು ನಾಥ್, ಸುಬ್ರಮಣ್ಯ, ಟಿಜಾ ಥೋಮಸ್, ನಿತಿನ್ ಅಮೀನ್, ಸುಮನ್ ಶೇಖರ್, ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.