ಬೆಂಗಳೂರು: ಕಳೆದ ವಾರ ಬಿಡುಗಡೆಯಾಗಿದ್ದ ‘ಎರಡನೇಸಲ’ ಚಿತ್ರದ ಪ್ರದರ್ಶನ ಸ್ಥಗಿತಗೊಳಿಸಲು ಚಿತ್ರದ ನಿರ್ಮಾಪಕ ಯೋಗೀಶ್ ನಿರ್ಧರಿಸಿದ್ದಾರೆ.
‘ಸಿನಿಮಾದ ಮುಂದಾಳು ನಿರ್ದೇಶಕರಾದ ಗುರುಪ್ರಸಾದ್ ಈವರೆಗೂ ಪ್ರಚಾರಕ್ಕೆ ಬಂದಿಲ್ಲ. ಚಿತ್ರ ತಲುಪಬೇಕಾದ ಹಂತ ತಲುಪಿಲ್ಲ. ಹೆಚ್ಚು ಚಿತ್ರಮಂದಿರಗಳು ಸಿಕ್ಕಿಲ್ಲ.
ಒಳ್ಳೆಯ ಸಿನಿಮಾ ಸಾಯಲು ಬಿಡಬಾರದು. ಹಾಗಾಗಿ, ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಾಹುಬಲಿಯಂತಹ ಸಿನಿಮಾ ಎರಡೂವರೆ ವರ್ಷದಲ್ಲಿ ಸಿದ್ಧಗೊಳ್ಳುತ್ತದೆ. ನಮ್ಮ ಸಿನಿಮಾಕ್ಕೆ 4 ವರ್ಷ ಬೇಕಾಯಿತು! ಹೀಗಾದರೆ ನಿರ್ಮಾಪಕರ ಕತೆ ಏನಾಗಬೇಕು.
ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರ ಸಲ್ಲಿಸಿದ್ದೇನೆ. ತುಂಬ ದುಃಖದಿಂದ ಸಿನಿಮಾ ಹಿಂಪಡೆಯುತ್ತಿದ್ದೇನೆ’ ಎಂದು ನಿರ್ಮಾಪಕ ಯೋಗೀಶ್ ನಾರಾಯಣ್ ಬೇಸರ ವ್ಯಕ್ತಪಡಿಸಿದರು.
ಮಾರ್ಚ್ 3ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಹೆಚ್ಚು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಇದಕ್ಕೆ ನಿರ್ದೇಶಕರಾದ ಗುರುಪ್ರಸಾದ್ ಅವರೂ ಕಾರಣ ಎಂದು ನಿರ್ಮಾಪಕ ಯೋಗೀಶ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ದೂರಿನ ಕುರಿತಾಗಿ ಮಾತನಾಡಿರುವ ನಿರ್ದೇಶಕ ಮಠ ಗುರುಪ್ರಸಾದ್, ವಾಣಿಜ್ಯ ಮಂಡಳಿಯಲ್ಲಿ ಎಲ್ಲಕ್ಕೂ ಉತ್ತರಿಸುತ್ತೇನೆ ಎಂದರು.
* ನಾಳೆ ನಿರ್ಮಾಪಕ ಸೇರಿದಂತೆ ಅವರ ಜತೆಗಿರುವವರಿಗೂ ದೊಡ್ಡ ಶಾಕ್ ಕಾದಿದೆ. ವಾಣಿಜ್ಯ ಮಂಡಳಿಯಲ್ಲಿ ಎಲ್ಲವನ್ನೂ ತಿಳಿಸುತ್ತೇನೆ.