ಶಿವಮೊಗ್ಗ: ಮಹಿಳೆಯರ ವೈಯಕ್ತಿಕ ಹಾಗೂ ಸಾಮಾಜಿಕ ಬದಲಾವಣೆಯ ಹೆಜ್ಜೆಯಲ್ಲಿ ಸ್ತ್ರೀಶಕ್ತಿ ಸಂಘಟನೆಗಳ ಪಾತ್ರ ಅನನ್ಯ ಎಂದು ನಿರ್ಮಲಾ ಸೇವಾ
ಕೇಂದ್ರದ ನಿರ್ದೇಶಕಿ ಸಿಸ್ಟರ್ ಹೆಲನ್ ಶ್ಲಾಘಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರು ಹಲವು ಸ್ತ್ರೀ ಸಂಘಟನೆ ಸ್ಥಾಪಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಆ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದ್ದಾರೆ ಎಂದರು.ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯಿಂದ ಶೋಷಿತಳಾಗುತ್ತಿದ್ದಳು. ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಮಹಿಳೆಯರ ಶೋಷಣೆಯೂ ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದರು.
ಜಿಲ್ಲಾ ಪಂಚಾಯ್ತಿ ಉಪಾದ್ಯಕ್ಷೆ ವೇದಾ ವಿಜಯಕುಮಾರ್ ಮಾತನಾಡಿ, ಈಚೆಗೆ ನಡೆಯುತ್ತಿರುವ ಮಹಿಳೆಯರ ಮೇಲಿನ ಶೋಷಣೆಗೆ ಮಹಿಳೆಯರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಮಹಿಳೆಯಿಂದಲೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ, ಉತ್ತಮ ಸಮಾಜ ನಿರ್ಮಾಣ ಮಾಡುವ ಮಹಿಳೆಯರು ಇತರ ಮಹಿಳೆಯರನ್ನೂ ಗೌರವದಿಂದ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಮಹಿಳೆಯರಿಗೆ ಎಲ್ಲ ಸಮಯದಲ್ಲೂ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಜಾಣ್ಮೆ ಇರಬೇಕು. ಹೆಣ್ಣು ಮದುವೆಯಾದ ನಂತರ ನಿರ್ವಹಿಸುವ ಪಾತ್ರಗಳಲ್ಲಿ ಅರ್ಥಪೂರ್ಣ ಹೆಜ್ಜೆಗಳನ್ನು ಇಡಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮೇಯರ್ ಏಳುಮಲೈ, ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಖಾ ಪ್ರವೀಣಕುಮಾರ್, ಪಲ್ಲವಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಮಂಜುನಾಥ್, ವಿಜಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಿ.ಜಿ.ಸುರೇಶ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ನಿರ್ದೇಶಕ ಕೆ.ಕೃಷ್ಣಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಚ್.ಕೃಷ್ಣಪ್ಪ ಉಪಸ್ಥಿತರಿದ್ದರು.
ವಿವಿಧೆಡೆ ಮಹಿಳಾ ದಿನಾಚರಣೆವಾತ್ಸಲ್ಯ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮಹಿಳೆಯರಿಗೆ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಾಯಿತು. ನಗರದ ಅತ್ಯಂತ ಹಿರಿಯ ಸ್ತ್ರೀರೋಗತಜ್ಞೆ ಡಾ.ವಿಮಲಾಬಾಯಿ, ವಾತ್ಸಲ್ಯ ಆಸ್ಪತ್ರೆಯ ಡಾ.ಅಮಿತಾ ಹೆಗ್ಡೆ, ಡಾ.ಗೀತಾರವಿ ಅವರನ್ನು ಸನ್ಮಾನಿಸಲಾಯಿತು.
ಜೇಸಿಐ ಶಿವಮೊಗ್ಗ ಮಲ್ನಾಡ್ನ ಎಸ್.ಚಂದ್ರಶೇಖರ್, ಗೌರೀಶ್ ಭಾರ್ಗವ್, ಲೀಲಾ ಚಿದಾನಂದ್,ಮಮತಾ ಚಂದ್ರಶೇಖರ್, ರೇಖಾ ಹೆಗ್ಡೆ, ಉಷಾ ವಸಂತಕುಮಾರ್, ದೀಪಾ ನರೇಂದ್ರ ಉಪಸ್ಥಿತರಿದ್ದರು.
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ: ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಡಾ.ಸುದರ್ಶನ್ ಮತ್ತು ಡಾ.ರಂಗನಾಥ ಹಾಗೂ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಘುನಂದನ್, ಕೆ.ಜಿ. ಪ್ರಕಾಶ್, ಆರೋಗ್ಯಮಿತ್ರ ಸಂತೋಷ ಹಡಗಲಿ, ರವಿಕಮಾರ, ಜಿಲ್ಲೆಯ ಆರೋಗ್ಯ ಮಿತ್ರರು ಉಪಸ್ಥಿತರಿದ್ದರು.
ಕೃಷಿ ವಿವಿ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಯಿತು. ಮಂಗಳೂರಿನ ಎಂಆರ್ಪಿಎಲ್ ನಿರ್ದೇಶಕಿ ಮಂಜುಳಾ ಉದ್ಘಾಟಿಸಿದರು. ಡಾ.ಜಯಲಕ್ಷ್ಮೀ ನಾರಾಯಣ ಹೆಗಡೆ, ಡಾ. ಪ್ರೀತಿ ಶಾನಭಾಗ್ ಮಹಿಳೆ ಕುರಿತು ಲೇಖನಗಳನ್ನು ಹೊಂದಿದ ಪುಸ್ತಕ ‘ಸುಗತ್ರಿ’ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಟಿ.ಕೆ.ಎಸ್.ಗೌಡ, ಡಾ.ಎಚ್.ಎಲ್. ಹರೀಶ್, ಕುಸುಮಾ ವಾಸುದೇವಪ್ಪ, ಡಾ.ಎಂ. ಮಂಜುನಾಥ ಉಪಸ್ಥಿತರಿದ್ದರು.ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಮಹಿಳೆರಿಗೆ ಸ್ತನ ಕ್ಯಾನ್ಸರ್ ತಪಾಸಣೆ ಅಗತ್ಯ ಕುರಿತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಡಾ.ಅಪರ್ಣಾ ಶ್ರೀವತ್ಸ, ಚಿಕ್ಕಮಗಳೂರಿನ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾರ್ಜುನ, ಡಾ.ರಾಗಪ್ರಿಯ ಅವರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಕಾರಾಗೃಹ: ಇಂಡಿಜಿನಸ್ ಇನೋವೇಷನ್ಸ್ ಸಂಸ್ಥೆ ನಗರದ ಜಿಲ್ಲಾ ಮಹಿಳಾ ಕಾರಾಗೃಹದಲ್ಲಿ ಮಹಿಳಾ ದಿನಾಚರಣೆ ಆಚರಿಸಿತು.
ಮಹಿಳಾ ಕೈದಿಗಳಿಗೆ ಉದ್ಯೋಗ ಅವಕಾಶ ದೊರೆಯಲು ಅನುಕೂಲಆಗುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೋನಿಕಾ ಲೆವಿನ್ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದರು.