ಹೊಸನಗರ: ‘ಒಡೆದು ಹೋದ ಮನಸ್ಸು, ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಮಠಗಳು ಮಾಡುವಂತಾಗಬೇಕು’ ಎಂದು ಮೂಲೆಗದ್ದೆ ಮಠದ ಪಟ್ಟಾಧಿಕಾರ ಸ್ವೀಕರಿಸಲಿರುವ ಶಾಂತಕುಮಾರ ದೇಶಿಕರ ಸ್ವಾಮೀಜಿ ಹೇಳಿದರು.
ಮೂಲೆಗದ್ದೆ ಮಠದಲ್ಲಿ ಏ.28ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪಟ್ಟಾಧಿಕಾರದ ಕುರಿತು ಸೊನಲೆ ಗ್ರಾಮದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಮಠಗಳು ಜಾತಿಯನ್ನು ಬಿಂಬಿಸಬಾರದು. ಜಾತಿಗೊಂದು ಮಠ ಸರಿ ಅಲ್ಲ. ಭಕ್ತಿ, ಬಸವ ತತ್ವ, ಶರಣ ಪರಂಪರೆಯನ್ನು ನಂಬಿದ ಎಲ್ಲ ಜಾತಿ, ಧರ್ಮೀಯರಿಗೆ ಮಠವನ್ನು ಸದಾ ತೆರೆಯುವಂತೆ ಆಗಬೇಕು’ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಕನಕೋತ್ಸವ, ಸಾವಿರಾರು ಮಹಿಳೆಯರಿಗೆ ಸಾಮೂಹಿಕ ಉಡಿತುಂಬವ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಏ.30ರಂದು ನಡೆಯಲಿರುವ ಪಟ್ಟಾಧಿಕಾರ ಮಹೋತ್ಸವದಲ್ಲಿ ದೇಶದ ವಿವಿಧ ಮಠಗಳ 50-–60 ಮಠಾಧೀಶರು ಭಾಗವಹಿಸುವರು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪಟೇಲ ಗರುಡಪ್ಪ ಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಿ.ಯುವರಾಜ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಾ ಮಹಾಬಲ, ಉಪಾಧ್ಯಕ್ಷ ಬಾಲಚಂದ್ರ ಗೌಡ, ಸದಸ್ಯೆ ನಾಗರತ್ನಮ್ಮ, ಪ್ರೊ.ಟಿ.ರುದ್ರಪ್ಪ, ಪ್ರಮುಖರಾದ ಉಮೇಶ್, ಭೋಜರಾಜ ಶೆಟ್ಟಿ, ಉದ್ಯಮಿ ಜಿ.ಟಿ.ಈಶ್ವರ್ ಹಾಜರಿದ್ದರು.
ಚೆನ್ನಪ್ಪ ಗೌಡ ಸ್ವಾಗತಿಸಿದರು. ಪಟ್ಟಾಧಿಕಾರ ಸಮಿತಿಯ ಅಧ್ಯಕ್ಷ ಹರತಾಳು ಜಯಶೀಲಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಲ್.ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು. ಯೋಗೇಂದ್ರ ವಂದಿಸಿದರು.