ಮೈಸೂರು: ಕಿಡ್ನಿ ವೈಫಲ್ಯದಿಂದ ಸಾವು–ಬದುಕಿನ ನಡುವೆ ಹೋರಾಡುತ್ತಿರುವ ಜಯಕುಮಾರ್ ಎಂಬ ಯುವಕನನ್ನು ವಿಶೇಷ ಆಂಬುಲೆನ್ಸ್ ನಲ್ಲಿ ಬುಧವಾರ ಬೆಂಗಳೂರಿಗೆ ಕರೆಸಿಕೊಂಡ ನಟ ಶಿವರಾಜ್ ಕುಮಾರ್, ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದರು.
ಜಾಲಹಳ್ಳಿಯ ಚಿತ್ರೀಕರಣದ ಸ್ಥಳ ದಲ್ಲಿ ನೆಚ್ಚಿನ ನಟ ಕಂಡೊಡನೆ ಹಿಗ್ಗಿದ ಜಯಕುಮಾರ್ ಹರ್ಷಗೊಂಡರು. ಆಂಬುಲೆನ್ಸ್ನಲ್ಲಿ ಯುವಕನ ಪಕ್ಕ ದಲ್ಲೇ ಕುಳಿತ ಶಿವರಾಜ್ಕುಮಾರ್, ಶೀಘ್ರ ಗುಣಮುಖರಾಗುವಂತೆ ದುಗುಡದಿಂದಲೇ ಅಭಿಮಾನಿಯನ್ನು ಹರಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿಯ ಜಯಮ್ಮ ಎಂಬುವರ ಪುತ್ರ ಜಯಕುಮಾರ್ (19) ಕಿಡ್ನಿ ವೈಫಲ್ಯದಿಂದ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ನಟ ಶಿವರಾಜ್ ಕುಮಾರ್ ಹಾಗೂ ಸಂಸದ ಆರ್.ಧ್ರುವನಾರಾಯಣ ಅವರನ್ನು ಕಣ್ತುಂಬಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ‘ಟಗರು’ ಚಿತ್ರೀಕರಣದಲ್ಲಿ ನಿರತರಾಗಿದ್ದ ಶಿವರಾಜ್ಕುಮಾರ್ ಅಭಿಮಾನಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು.
‘ಅಭಿಮಾನಿಯನ್ನು ಕಂಡು ಖುಷಿ, ದುಃಖ ಒಟ್ಟಿಗೆ ಆಗಿದೆ. ಚಿತ್ರೀಕರಣದಲ್ಲಿ ನಿರತರಾಗಿದ್ದ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗೆ ಅಗತ್ಯ ನೆರವು ನೀಡುತ್ತೇನೆ. ಸಾರ್ವಜನಿಕರು ಕೂಡ ಚಿಕಿತ್ಸೆಗೆ ಸಹಾಯಹಸ್ತ ಚಾಚಬೇಕು’ ಎಂದು ಶಿವರಾಜ್ ಕುಮಾರ್ ಕೋರಿಕೊಂಡರು.
ಬೆಳಿಗ್ಗೆ 10.30ಕ್ಕೆ ಕೆ.ಆರ್.ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್ ಮಧ್ಯಾಹ್ನ 1.30 ಗಂಟೆಗೆ ಜಾಲಹಳ್ಳಿ ತಲುಪಿತು. ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 6ಕ್ಕೆ ಆಸ್ಪತ್ರೆಗೆ ಮರ ಳಿತು. ಕೆಲ ದಿನ ಗಳ ಹಿಂದೆ ಧ್ರುವನಾರಾಯಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಜಯ ಕುಮಾರ್ ಆರೋಗ್ಯ ವಿಚಾರಿಸಿದ್ದರು.