ಉಡುಪಿ: ರಾಜ್ಯದ 27,623 ಗ್ರಾಮಗಳ ಪೈಕಿ 6,829 ಅನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾ ಗಿದ್ದು, ಶೇ 24.92ರಷ್ಟು ಸಾಧನೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸಹ ಬಯಲು ಶೌಚ ಮುಕ್ತವಾಗಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ ಇಲಾಖೆಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಪರ್ಕಳದ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಹಾಗೂ ಸ್ವಚ್ಛ ಶಕ್ತಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನದಡಿ ಈ ಬಾರಿ ರಾಜ್ಯಕ್ಕೆ ₹253.43 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಯ ಮೇರೆಗೆ ಅದನ್ನು ₹419.56 ಕೋಟಿಗೆ ಹೆಚ್ಚಿಸಲಾಗಿದೆ ಎಂದರು.
ಸ್ವಚ್ಛ ಭಾರತ ಯೋಜನೆಯಲ್ಲಿ ಈ ವರೆಗೆ ದೇಶದಲ್ಲಿ 3.50 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರದ 101 ಜಿಲ್ಲೆಗಳ 1.67 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ.
ದೇಶದ 61.27ರಷ್ಟು ಜನರು ಶೌಚಾಲ ಯಗಳನ್ನು ಹೊಂದಿದ್ದಾರೆ. 2016–17ನೇ ಸಾಲಿನಲ್ಲಿ ಒಟ್ಟು ₹10,500 ಕೋಟಿಯನ್ನು ಶೌಚಾಲಯ ನಿರ್ಮಾಣ ಕ್ಕಾಗಿ ಮೀಸಲಿಡಲಾಗಿತ್ತು, ಅದರಲ್ಲಿ ₹8853 ಕೋಟಿಯನ್ನು ರಾಜ್ಯಗಳು ಖರ್ಚು ಮಾಡಿವೆ. 2017–18ನೇ ಸಾಲಿ ನಲ್ಲಿ ಒಟ್ಟು ₹14,000 ಕೋಟಿಯನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದ 101 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಎಂದು ಈಗಾಗಲೇ ಘೋಷ ಣೆ ಮಾಡಲಾಗಿದೆ. ಉತ್ತರಾ ಖಂಡ, ಮೇಘಾಲಯ, ಕೇರಳ, ಸಿಕ್ಕಿಂ ರಾಜ್ಯಗಳು ಈಗಾಗಲೇ ಶೇ100ರಷ್ಟು ಪ್ರಗತಿ ಸಾಧಿಸಿವೆ. ಹರಿಯಾಣ, ಗುಜರಾತ್, ಮೇಘಾಲಯ, ಮಿಜೋರಾಂ, ಮಣಿ ಪುರ, ಪಶ್ಚಿಮ, ಬಂಗಾಳ, ಪಂಜಾಬ್ ಮತ್ತು ಗೋವಾ ರಾಜ್ಯಗಳು ಮುಂಚೂಣಿ ಯಲ್ಲಿ ಎಂದು ಅವರು ಮಾಹಿತಿ ನೀಡಿದರು.
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ವೇಳೆಗೆ ದೇಶವನ್ನು ಬಯಲು ಶೌಚ ಮುಕ್ತಗೊಳಿ ಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಸರ್ಕಾರ ಮಾತ್ರ ಕೆಲಸ ಮಾಡಿ ದರೆ ಈ ಗುರಿ ಸಾಧನೆ ಸಾಧ್ಯವಾಗದು. ದೇಶದ ಎಲ್ಲ ಜನ, ಸಂಘ– ಸಂಸ್ಥೆಗಳು ಸಹ ಇದರಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ, ಜಿಲ್ಲೆ ಯಲ್ಲಿ ಸ್ವಚ್ಛ ಶಕ್ತಿ ಸಪ್ತಾಹವನ್ನು ಯಶಸ್ವಿ ಯಾಗಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಉಪಾಧ್ಯಕ್ಷ ರಾಜೇಂದ್ರ ಪಂದಬೆಟ್ಟು, ಸ್ವಚ್ಛ ಭಾರತ ಯೋಜನೆಯ ಸಮಾ ಲೋಚಕಿ ಕಾಂಚನ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ವಸಂತಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
* ನಿರ್ಮಲ ಭಾರತ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಣೆ ನೀಡುವುದು ಮಾತ್ರವಲ್ಲದೆ ಅವುಗಳನ್ನು ಬಳಸುವಂತೆಯೂ ಜನರ ಮನವೊಲಿಸಬೇಕು.
ರಮೇಶ್ ಜಿಗಜಿಣಗಿ, ಕೇಂದ್ರ ಸಚಿವ