ಕಲಬುರ್ಗಿ: ನಗರದ ಎರಡು ಕಡೆಗಳಲ್ಲಿ ಗುರುವಾರ ಬೆಳಿಗ್ಗೆ ಕೃಷ್ಣಮೃಗ ಮರಿಗಳು ಕಂಡುಬಂದಿದ್ದು, ಅವುಗಳನ್ನು ಇಲ್ಲಿಯ ಕಿರು ಮೃಗಾಲಯಕ್ಕೆ ಸಾಗಿಸಿ ಅಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅದರಲ್ಲಿ ಒಂದು ಮರಿ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದೆ.
ಗುರುವಾರ ಬೆಳಿಗ್ಗೆ ಇಲ್ಲಿಯ ಲಾಲಗೇರಿ ಕ್ರಾಸ್ನ ಡಾ.ಹರವಾಳ ಆಸ್ಪತ್ರೆ ಎದುರಿನ ಚರಂಡಿಯಲ್ಲಿ ಕೃಷ್ಣಮೃಗದ ಒಂದು ಮರಿ ಬಿದ್ದಿತ್ತು. ಬೆಳಿಗ್ಗೆ ಅದನ್ನು ಗಮನಿಸಿದ ಸಾರ್ವಜನಿಕರು ಸಂಚಾರ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಂಚಾರ ಠಾಣೆಯ ಹೆಡ್ಕಾನ್ಸ್ಟೆಬಲ್ ರಾಜಕುಮಾರ ಕೊಬಾಳ, ಕಾನ್ಸ್ಟೆಬಲ್ ಈರಣ್ಣ ಅವರು ಆ ಮರಿಯನ್ನು ಕಿರು ಮೃಗಾಲಯಕ್ಕೆ ಒಪ್ಪಿಸಿದ್ದರು.
‘ನಾಯಿಗಳು ಕಚ್ಚಿದ್ದರಿಂದ ಆ ಮರಿಯ ತಲೆ, ಕಾಲು, ಬೆನ್ನಿಗೆ ತೀವ್ರ ಗಾಯಗಳಾಗಿದ್ದವು. ಪಶುವೈದ್ಯ ಡಾ.ಎಸ್. ಜಂಬಾಳ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಿಸದೆ ಅದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ್ದು, ಎರಡು ದಿನಗಳಲ್ಲಿ ವರದಿ ಬರಲಿದೆ. ಆ ನಂತರ ಪ್ರಕರಣ ದಾಖಲಿಸಿಕೊಂಡು, ಎಸಿಎಫ್ ಅವರ ಸಮ್ಮುಖದಲ್ಲಿ ಶವ ದಹನ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಮುನೀರ್ ಅಹಮ್ಮದ್ ತಿಳಿಸಿದರು.
ರಾಘವೇಂದ್ರ ಕಾಲೊನಿಯಲ್ಲಿ ಸಿಕ್ಕ ಇನ್ನೊಂದು ಮರಿಯನ್ನೂ ಕಿರುಮೃಗಾಲಯಕ್ಕೆ ಸೇರಿಸಿದ್ದು, ಅದು ಆರೋಗ್ಯವಾಗಿದೆ. ಇತರೆ ಕೃಷ್ಣಮೃಗಗಳಿಗೆ ಹುಡುಕಾಟ: ‘ಇಲ್ಲಿಯ ಲಾಲಗೇರಿ ಕ್ರಾಸ್ನ ಡಾ.ಹರವಾಳ ಆಸ್ಪತ್ರೆ ಹತ್ತಿರ ಹಾಗೂ ರಾಘವೇಂದ್ರ ಕಾಲೊನಿಯಲ್ಲಿ ತಲಾ ಒಂದು ಕೃಷ್ಣಮೃಗದ ಮರಿಗಳು ಪತ್ತೆಯಾಗಿದ್ದವು.
ಆಳಂದ ರಸ್ತೆಯ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯ ಸುತ್ತಮುತ್ತ ಕೃಷ್ಣಮೃಗಗಳು ಇದ್ದು, ಅಲ್ಲಿಂದ ಇವು ತಪ್ಪಿಸಿಕೊಂಡು ಇಲ್ಲವೆ ನೀರು ಹುಡುಕುತ್ತ ನಗರಕ್ಕೆ ಬಂದಿರಬಹುದು’ ಎಂದು ಮುನೀರ್ ಅಹಮ್ಮದ್ ಹೇಳಿದರು.
‘ಸಾಮಾನ್ಯವಾಗಿ ಕೃಷ್ಣಮೃಗಗಳು ಗುಂಪುಗುಂಪಾಗಿ ಸಂಚರಿಸುತ್ತವೆ. ಒಂದು ಗುಂಪಿನಲ್ಲಿ 10ರಿಂದ 12 ಕೃಷ್ಣಮೃಗಗಳು ಇರುತ್ತವೆ. ಕೃಷ್ಣಮೃಗಗಳ ಪತ್ತೆಗೆ ಎಂ.ಎಸ್.ಕೆ. ಮಿಲ್ ಪ್ರದೇಶ, ರಾಘವೇಂದ್ರ ನಗರ, ಡಬರಾಬಾದ್ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು.