ಲಿಂಗಸುಗೂರು: ತಾಲ್ಲೂಕಿನ ಗುರುಗುಂಟಾದ ಅಮರೇಶ್ವರ ದೇವರ ಜಾತ್ರೆಯನ್ನು ಕೃಷಿಕರ ಜಾತ್ರೆ ಎಂದೇ ಕರೆಯುತ್ತಿರುವುದು ವಾಡಿಕೆ. ಸಾಂಪ್ರದಾಯಿಕವಾಗಿ ಹೋಳಿ ಹುಣ್ಣಿಮೆಯ ಒಂದು ವಾರ ಮೊದಲೇಜಾತ್ರಾಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ.
ಹೋಳಿ ಹುಣ್ಣಿಮೆ ದಿನ ಅಮರೇಶ್ವರ ದೇವಸ್ಥಾನಕ್ಕೆ ಗುರುಗಳಾದ ಅಭಿನವ ಗಜದಂಡ ಶಿವಾಚಾರ್ಯರು ಹಾಗೂ ಕಳಸದ ಪ್ರವೇಶ ಆಗುತ್ತಿದ್ದಂತೆ ಜಾತ್ರೆಯ ವಿಧಿ ವಿಧಾನಗಳಿಗೆ ಚಾಲನೆ ದೊರೆಯುತ್ತದೆ.
ಜಾತ್ರಾಮಹೋತ್ಸವಕ್ಕೆ ಬರುವ ಭಕ್ತರಿಗೆ ತೊಂದರೆ ಆಗದಿರಲಿ ಎಂದು ಹೆಚ್ಚುವರಿಯಾಗಿ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನ ಆವರಣದಲ್ಲಿ ಕಳ್ಳತನ, ಇತರೆ ಸಮಾಜ ವಿರೋಧಿ ಕೃತ್ಯ ಜರುಗದಂತೆ ಎಚ್ಚರಿಕೆ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹಟ್ಟಿ ಚಿನ್ನದ ಗಣಿ, ವಿವಿಧ ಇಲಾಖೆ ಸಹಯೋಗದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿರುವುದು ಕಾಣಸಿಗುತ್ತದೆ.
ರಥೋತ್ಸವ: ಹೋಳಿ ಹುಣ್ಣಿಮೆ ದಿನವಾದ ಮಾರ್ಚ್– 12ರಂದು ಸಂಜೆ ರಥೋತ್ಸವ ಜರುಗಲಿದೆ. ಜಾತ್ರೆಯು 15 ದಿನಗಳ ಕಾಲ ಜರುಗಲಿದ್ದು ಜಾನುವಾರು ಬಜಾರ, ಕೃಷಿ ಪರಿಕರ, ಬಟ್ಟೆ, ಕಿರಾಣಿ, ಬಳೆ, ಮಿಠಾಯಿ, ಹೋಟೆಲ್, ಬಾಂಡೆ, ಆಡುಗೆ ಸಾಮಗ್ರಿ ಸೇರಿದಂತೆ ಇತರೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಸಾಗರ್ ತಿಳಿಸಿದ್ದಾರೆ.
ಜಾತ್ರೆ ವೇಳೆಯಲ್ಲಿ ಅಗತ್ಯತೆಗೆ ತಕ್ಕಷ್ಟು ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಬಳಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ಸಮಾಜ ವಿರೋಧಿ ಕೃತ್ಯಗಳ ಮಾಹಿತಿ ನೀಡಿ ಸಹಕಾರ ನೀಡುವಂತೆ ಡಿವೈಎಸ್ಪಿ ಎಸ್.ಎಚ್, ಸುಬೇದಾರ್, ಸಿಪಿಐ ವಿ.ಎಸ್. ಹಿರೇಮಠ, ಪಿಎಸ್ಐ ದಾದಾವಲಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.