ಮುನಿರಾಬಾದ್: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾದ ‘ತೀವ್ರನಿಗಾ ಘಟಕ’ (ಐಸಿಯು)ದ ಸೇವೆಯನ್ನು ಶನಿವಾರ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಲಿಂಗರಾಜ್ ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮಂಡಳಿ (ಎಚ್ಕೆಆರ್ಡಿಬಿ)ಆಸ್ಪತ್ರೆಯ ಆಧುನೀ ಕರಣ ಹಾಗೂ ಐಸಿಯು ಘಟಕದ ಸ್ಥಾಪನೆಗೆ ಸುಮಾರು ₹ 1.2 ಕೋಟಿ ಹಣ ನೀಡಿದ್ದು, ಮೆಡಿಕಲ್ ಐಸಿಯು, ಸರ್ಜಿ ಕಲ್ ಐಸಿಯು ಎಂದು ಎರಡು ವಿಭಾಗಗಳಲ್ಲಿ ಕ್ರಮವಾಗಿ 3 ಮತ್ತು 4 ಹಾಸಿಗೆಯುಳ್ಳ ಘಟಕದ ಉದ್ಘಾಟನೆ ನಡೆಯಲಿದೆ.
ಶ್ವಾಸಕೋಶ, ಕಿಡ್ನಿ, ತೀವ್ರ ನಂಜು, ಗರ್ಭಿಣಿಯರ ತೀವ್ರ ತರಹದ ಕಾಯಿಲೆ, ಡಯಾಬಿಟಿಸ್, ಹಾವು ಕಡಿತ, ವಿಷ ಸೇವನೆ ಪ್ರಕರಗಳಲ್ಲಿ ದಾಖಲಾದ ರೋಗಿ ಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಈಗಾಗಲೇ ಹಲವು ವಾರ್ಡಗಳಿಗೆ ಕೇಂದ್ರೀಕೃತ(ಸೆಂಟ್ರಲೈಸ್ಡ್)ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಸುಸಜ್ಜಿತ 30ಬೆಡ್ಗಳ ಆಸ್ಪತ್ರೆ ಇದಾಗಿದ್ದು, ಗರ್ಭಿಣಿಯರ ಹೆರಿಗೆ, ಸಾಮಾನ್ಯ ವಾರ್ಡಗಳಲ್ಲಿ ಸ್ತ್ರೀ, ಪುರುಷ ಎಂದು ಎರಡು ವಿಭಾಗ ಮಾಡಲಾಗಿದೆ.
ಇದರ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅದು ಅತ್ಯಂತ ಕಡಿಮೆ ಶುಲ್ಕ ಪಡೆದು ಸೇವೆ ನೀಡಲು ಉದ್ದೇಶಿಸಲಾಗಿದೆ.
ಹೆರಿಗೆ, ಸಂತಾನ ಹರಣ ಶಸ್ತ್ರಚಿಕಿತ್ಸೆ ಪೂರ್ವದಲ್ಲಿ ರೋಗಿಗಳ ನಾಡಿಬಡಿತ, ರಕ್ತದ ಒತ್ತಡ ತಿಳಿಯಲು ‘ಮಾನಿಟರ್’ ಅಳವಡಿ ಸಲಾಗಿದೆ.
ಕಡಿಮೆ ಶುಲ್ಕ ಪಡೆದು ಉತ್ತಮ ಸೇವೆ ನೀಡಲು ನಮ್ಮ ವೈದ್ಯರು ಸಜ್ಜಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ದೊಡ್ಡ ಆಸ್ಪತ್ರೆಗೆ ಕಳಿಸುವ ಬದಲು ಇಲ್ಲೇ ಅವಶ್ಯಕ, ಆಧುನಿಕ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಡಾ.ಟಿ.ಲಿಂಗರಾಜ್. ಶನಿವಾರ ನಡೆ ಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಧಾರವಾಡದ ಎಸ್.ಡಿ.ಎಂ. ದಂತವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.