ಇಂಡಿ: 12ನೇ ಶತಮಾನದಲ್ಲಿ ಅನೇಕ ಶರಣರು ಆಗಿಹೋದರು. ಅವರೆಲ್ಲ ತಮ್ಮ ಕಾಯಕ ದೊಂದಿಗೆ ಸಮಾಜದಲ್ಲಿರುವ ಕಂದಾಚಾರ, ಮೂಢನಂಬಿಗೆ, ಮೇಲು ಕೀಳುಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿ ಸಮಾಜದ ಓರೆಕೋರೆಗಳನ್ನು ತಿದ್ದಿದರು ಎಂದು ಕಂದಾಯ ಉಪ ವಿಭಾಗಾಧಿಕಾರಿ ಡಾ.ಶಂಕರ ವಣಿಕ್ಯಾಳ ಹೇಳಿದರು.
ಅವರು ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಆಯೋಜಿಸಿದ್ದ ಆದ್ಯ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದರ ಧೂಳಯ್ಯ, ಉರಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಂದಿನ ಮಹಾನ್ ಶರಣ, ಶರಣೆಯರು ಬರೆದ ವಚನಗಳನ್ನು ನಮ್ಮ ನಮ್ಮ ಮನೆಗಳಲ್ಲಿ ಇಡುವ ಮೂಲಕ ಅಂಥವರ ನಡೆ, ನುಡಿ , ಆಚಾರ, ವಿಚಾರ, ನಯ, ವಿನಯತೆ, ರೀತಿ, ನೀತಿ, ಆದರ್ಶ, ಮಾನವೀಯ ಮೌಲ್ಯಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಮನುಷ್ಯನಿಗೆ ಜೀವನದಲ್ಲಿ ಆಸೆ ಇರಬೇಕು. ಆದರೆ ಅತಿಯಾಸೆ ಹಾಗೂ ದುರಾಸೆ ಇರಬಾರದು. ಅವುಗಳನ್ನು ಬಿಟ್ಟು ದೂರ ಇದ್ದವರೇ ಮಹಾನ್ ಚೇತನರು. ಇವರ ದಿನಾಚರಣೆ ಮಾಡುವ ನಾವು ನಮ್ಮ ಸಮಾಜವನ್ನು ಬದಲಾವಣೆ ಮಾಡಬಹುದು ಎಂದರು.
ಉಪನ್ಯಾಸಕ ಸೂರ್ಯಕಾಂತ ಕಟಕದೊಂಡ ಹಾಗೂ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಜಿ. ಭತಗುಣಕಿ ವಚನಕಾರರ ಕುರಿತು ಉಪನ್ಯಾಸ ನೀಡುತ್ತ ಆದ್ಯ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಶಿವಶರಣ ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಹಾಗೂ ಉರಿಲಿಂಗ ಪೆದ್ದಿ ಇವರೆಲ್ಲ ಬಸವಣ್ಣನವರ ಹೆಗಲಿಗೆ ಹೆಗಲು ಕೊಟ್ಟು ದುಡಿದವರು.
ಸಮಾಜದಲ್ಲಿರುವ ಜಾತೀಯತೆ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದವರು. ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರಂಭದಲ್ಲಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಆದ್ಯವಚನಕಾರರ ಭಾವಚಿತ್ರಕ್ಕೆ ಪುರಸಭೆ ಅದ್ಯಕ್ಷ ಶ್ರೀಕಾಂತ ಕುಡಿಗನೂರ ತಹಶೀಲ್ದಾರ್ ಎಸ್.ಎಂ.ಮ್ಯಾಗೇರಿ ಪೂಜೆ ಸಲ್ಲಿಸಿದರು. ನಂತರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ಮಂಗಲಕಾರ್ಯಾಲಯಕ್ಕೆ ತಲುಪಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರುಕ್ಮುದ್ಧೀನ ತದ್ದೆವಾಡಿ, ತಹಶೀಲ್ದಾರ್ ಎಸ್. ಎಂ. ಮ್ಯಾಗೇರಿ, ಪಿಎಸ್ಐ ಜಿ. ಎಸ್. ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಸಿ. ಎಂ. ಬಂಡಗಾರ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಸಿದ್ದು ಡಂಗಾ, ಅರ್ಜುನ ಪಾರ್ಶಿ, ಜೆ. ಕೆ. ಬಗಲಿ, ನಾಮದೇವ ಪಾರ್ಶಿ, ರಾಜು ಪಡಗಾನೂರ, ಎ ಬಿ. ಕೌಲಗಿ, ಬಿ. ಎ. ರಾವೂರ ಹಾಜರಿದ್ದರು.