ಸಿಂದಗಿ: ಉತ್ತರಕ ರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಹಾಗೂ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಸಿಂದಗಿ ನಗರದ ಮಿನಿವಿಧಾನಸೌಧ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಇಲ್ಲಿಯ ಗೋಲಗೇರಿ ನಾಕಾ ರಸ್ತೆಯಿಂದ ನೂರಾರು ಕಾರ್ಯಕರ್ತರನ್ನೊಳಗೊಂಡು ಪ್ರತಿಭಟನೆ ಪ್ರಾರಂಭಗೊಂಡಿತು. ಮೆರವಣಿಗೆ ವಿವೇಕಾನಂದ ವೃತ್ತದ ಮೂಲಕ ಕಾಲೇಜು ರಸ್ತೆಯಿಂದ ನೇರವಾಗಿ ಮಿನಿವಿಧಾನಸೌಧ ತಲುಪಿತು. ವಿಧಾನಸೌಧದ ಎದುರು ಕೆಲ ಕಾಲ ಕಾರ್ಯಕರ್ತರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ಕೈಗೊಂಡು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗಿದ್ದು ಸದಾ ಕುಂಭಕರ್ಣನಂತೆ ನಿದ್ರಾ ಲೋಕಕ್ಕೆ ಹೋಗಿರುತ್ತಾರೆ. ಅಂತೆಯೇ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಸಾಧನೆ ಹೊಂದಿದೆ ಎಂದು ಟೀಕಿಸಿದರು.
ಅಖಂಡ ಕರ್ನಾಟಕದಲ್ಲಿ ಉತ್ತರಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹಿಂದುಳಿದ ಉತ್ತರಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಹೈದರಾಬಾದ್ aಕರ್ನಾಟಕ ಪ್ರದೇಶಕ್ಕೆ ಈಗಾಗಲೇ ಪ್ರತ್ಯೇಕ, ವಿಶೇಷ ಅನುದಾನ ಬಿಡುಗಡೆ ಮಾಡಿದಂತೆ ಉತ್ತರಕರ್ನಾಟಕ ಪ್ರದೇಶದ ಅಭಿವೃದ್ಧಿ ಗೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅದರಂತೆ ರೈತರ ಸಾಲ ಮನ್ನಾ ಮಾಡದೇ ಹೋದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಎಚ್ಚರಿಕೆ ನೀಡಿದರು.
ಸುಡು, ಸುಡು, ಪ್ರಖರ ಬಿಸಿಲಲ್ಲಿ ಕಾರ್ಯಕರ್ತರು ಮೈ ಮೇಲಿದ್ದ ಬಟ್ಟೆಗಳನ್ನು ತೆಗೆದು ಅರೆಬೆತ್ತಲೆಯೊಂದಿಗೆ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಯಿಸಿದರು.
ತಹಶೀಲ್ದಾರ ಗ್ರೇಡ್–2 ಎಂ.ಎಸ್.ಅರಕೇರಿ ಅವರಿಗೆ ಪ್ರತಿಭಟನಕಾರರ ಪರವಾಗಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮನವಿ ಪತ್ರ ಸಲ್ಲಿಸಿದರು. ಕರವೇ ಉತ್ತರಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ವಿಜಯಪುರ, ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ ಸಂದೀಪ ಚೌರ, ತಾಲ್ಲೂಕು ಅಧ್ಯಕ್ಷ ಚೇತನ ರಾಂಪುರ, ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ದೇವರಹಿಪ್ಪರಗಿ, ರಾಜೂ ಮದರಖಾನ, ಸಾಹೇಬಣ್ಣ ಮಡಿವಾಳr, ಮಹಾದೇವ ರಾವಜಿ, ರವಿ ನಾಯ್ಕೋಡಿ, ರಮೇಶ ಚಿನ್ನಾಕಾರ, ಗೊಲ್ಲಾಳ ಬ್ಯಾಕೋಡ, ರವಿಕಾಂತ ಬಿರಾದಾರ, ಶರಣು ಕಕ್ಕಳಮೇಲಿ, ಮುತ್ತು ಹಿಪ್ಪರಗಿ, ಮಹಾಂತೇಶ ಪರಗೊಂಡ, ಸಂತೋಷ ಕ್ಷತ್ರಿ, ಮಂಜು ನಾಯ್ಕೋಡಿ ಹಾಜರಿದ್ದರು.