ಹುಬ್ಬಳ್ಳಿ: ‘ಎಲ್ಲ ಧರ್ಮೀಯರೂ ಸೌಹಾರ್ದದಿಂದ ಹಬ್ಬವನ್ನು ಆಚರಣೆ ಮಾಡಿದರೆ ಅದರ ಸಂಭ್ರಮ ಇಮ್ಮಡಿಸುತ್ತದೆ. ಅದೇ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೋಳಿ ಹಬ್ಬ ಆಚರಿಸಬೇಕು’ ಎಂದು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಕಾರವಾರ ರಸ್ತೆಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ಸೌಹಾರ್ದ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಒಂದು ಧರ್ಮೀಯರು ತಮ್ಮ ಹಬ್ಬವನ್ನು ಆಚರಿಸುವಾಗ ಅನ್ಯ ಧರ್ಮೀಯರು ಅದಕ್ಕೆ ಸಹಕಾರ ನೀಡಬೇಕು. ಭಾರತದಂತಹ ಬಹು ವೈವಿಧ್ಯಮಯ ದೇಶದಲ್ಲಿ ಇದು ಅಗತ್ಯ’ ಎಂದರು.
ಮೇಯರ್ ಡಿ.ಕೆ. ಚವ್ಹಾಣ ಮಾತನಾಡಿ, ‘ಇಷ್ಟು ವರ್ಷಗಳಿಂದ ಅದ್ಧೂರಿಯಾಗಿ ಹೋಳಿ ಹಬ್ಬ ಆಚರಿಸುತ್ತಾ ಬಂದರೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುಂದೆಯೂ ಇದನ್ನೇ ಕಾಯ್ದುಕೊಂಡು ಹೋಗಬೇಕು. ಬಣ್ಣ ಆಡುವಾಗ ಹೆಚ್ಚು ನೀರಿನ ಅವಶ್ಯಕತೆ ಇದ್ದು, ಅಗತ್ಯವಿರುವಷ್ಟು ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ‘ಇದೀಗ ಪಿಯುಸಿ ಪರೀಕ್ಷೆಗಳು ಬಂದಿದ್ದು, ಮಕ್ಕಳಿಗೆ ಈ ಸಮಯ ಅತ್ಯಂತ ಅಮೂಲ್ಯವಾದುದು. ಆದ್ದರಿಂದ ಅವರ ಓದಿಗೆ ಅಡ್ಡಿಯಾಗದಂತೆ ಹಲಗೆ ಬಾರಿಸಿ, ಬಣ್ಣ ಆಡುವ ಸಂಭ್ರಮ ಮುಗಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತ ನಿಮ್ಮ ಜೊತೆಗಿರುತ್ತದೆ’ ಎಂದು ಹೇಳಿದರು.
ಉಪಮೇಯರ್ ಲಕ್ಷ್ಮಿಬಾಯಿ ಬಿಜವಾಡ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಶಾಸಕ ವೀರ-ಭದ್ರಪ್ಪ ಹಾಲಹರವಿ, ಮಹೇಶ ಟೆಂಗಿನಕಾಯಿ ಮತ್ತಿತರರು ಇದ್ದರು.