ಕನಕಪುರ: ಕಸಬಾ ಹೋಬಳಿ ಗಂಗಾಧರ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ 2 ಕಾಡು ಮೊಲಗಳನ್ನು ಬೇಟೆಯಾಡಿದ್ದ ಆರೋಪಿಯನ್ನು ಕನಕಪುರ ವಲಯ ಅರಣ್ಯಾಧಿಕಾರಿ ಬಂಧಿಸಿದರು.
ಆರೋಪಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಅಣೇದೊಡ್ಡಿ ಗ್ರಾಮದ ನರಸಪ್ಪನ ಮಗ ವೆಂಕಟೇಶ್, ನಗರದ ಮೆಳೆಕೋಟೆ ಎ.ಕೆ. ಕಾಲೊನಿಯಲ್ಲಿ ವಾಸವಿದ್ದಾನೆ.
ಮೆಳೆಕೋಟೆ ಎ.ಕೆ.ಕಾಲೊನಿಯ ವಾಸಿ ರಾಜೇಗೌಡ ಮತ್ತೊಬ್ಬ ಆರೋಪಿಯಾಗಿದ್ದು ಈತ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಕಲ್ಲುಬೀಸಿ ಪರಾರಿಯಾಗಿದ್ದಾನೆ.
ಕಾಡುಪ್ರಾಣಿ ಬೇಟೆ ಬಗ್ಗೆ ಮಾಹಿತಿ ಮೇರೆಗೆ ಎಸಿಎಫ್. ವೆಂಕಟೇಶ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಸಂಜೆ ಅರಣ್ಯ ಪ್ರದೇಶದಿಂದ ಹೊರ ಬರುತ್ತಿದ್ದ ಇಬ್ಬರನ್ನು ಹಿಡಿದು ಪರಿಶೀಲಿಸಿದಾಗ ಬೇಟೆಯಾಡಿದ 2 ಮೊಲ, ಬೇಟೆಗೆ ಬಳಸಿದ್ದ 2 ಕುಡುಗೋಲು, 15 ಮೀಟರ್ ಮೊಲದ ಬಲೆ ಸಿಕ್ಕಿದೆ. ಆರೋಪಿ ವೆಂಕಟೇಶ್ ಜತೆಗೆ ದ್ವಿಚಕ್ರ ವಾಹನ ಮತ್ತು ಆಟೋವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ವೆಂಕಟೇಶ್ನನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.