ಬೆಂಗಳೂರು: ಒಳಚರಂಡಿ ಮತ್ತು ಇಳಿಗುಂಡಿಗೆ (ಮ್ಯಾನ್ಹೋಲ್) ಇಳಿದು ಪ್ರಾಣ ಕಳೆದುಕೊಂಡ ನಗರದ ಮೂವರ ಪೌರಕಾರ್ಮಿಕರ ಕುಟುಂಬಕ್ಕೆ ಸಹಾಯ ಮಾಡಲು ಅಮರಾವತಿ ಚಿತ್ರತಂಡ ಭಾನುವಾರ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಉಚಿತ ಪ್ರದರ್ಶನ ಏರ್ಪಡಿಸಿತ್ತು.
‘ಪ್ರದರ್ಶನಕ್ಕೆ ನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 100 ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಪ್ರದರ್ಶನಕ್ಕೆ ಪ್ರವೇಶ ದರವನ್ನು ನಿಗದಿಪಡಿಸದೆ, ಅವರ ಕೈಲಾದಷ್ಟು ಹಣ ನೀಡಬೇಕೆಂದು ಹೇಳಿದ್ದವು’ ಎಂದು ಅಮರಾವತಿ ಸಿನಿಮಾ ನಿರ್ದೇಶಕ ಬಿ.ಎಂ. ಗಿರಿರಾಜ್ ತಿಳಿಸಿದರು
‘ಪ್ರಜಾವಾಣಿ’ ಅಂಕಣಕಾರ ನಟರಾಜ್ ಹುಳಿಯಾರ್ ಅವರು ತಮಗೆ ಬಂದ ಪ್ರಶಸ್ತಿಯ ಮೊತ್ತದಲ್ಲಿ ₹10 ಸಾವಿರವನ್ನು ನೀಡಿದ್ದಾರೆ. ಹೀಗೆ ಸಿನಿಮಾ ವೀಕ್ಷಿಸಿದ ಎಲ್ಲರೂ ಹಣ ನೀಡಿದ್ದಾರೆ. ಒಟ್ಟು ₹55 ಸಾವಿರ ಹಣ ಸಂಗ್ರಹವಾಗಿದೆ. ಫೇಸ್ಬುಕ್ನಲ್ಲೂ ಹಣ ಸಂಗ್ರಹಕ್ಕಾಗಿ ಅಭಿಯಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೂರು ದಿನ ನಗರದ ಕಸ ತೆಗೆಯದೆ ಪ್ರತಿಭಟಿಸಿದ್ದರು. ರಾಜಧಾನಿ ಗಬ್ಬು ನಾರುತ್ತಿದ್ದುದು ವಿಶ್ವದ ಸುದ್ದಿಯಾಗಿತ್ತು. ಕಾರ್ಮಿಕರ ಕುರಿತ ನನ್ನ ಸಿನಿಮಾ ಕನಸಿಗೆ ಆ ಪ್ರತಿಭಟನೆಯೂ ಇಂಬು ಕೊಟ್ಟಿತು’ ಎಂದರು.
ಸಿನಿಮಾ ತಂಡ ಪೌರ ಕಾರ್ಮಿಕರಿಗೆ, ಮಾನವ ಹಕ್ಕುಗಳ ಹೋರಾಟಗಾರಿಗೆ ಹಾಗೂ ಮಹಿಳಾ ಸಂಘಟನೆಗಳಿಗೆ ವಿಶೇಷ ಪ್ರದರ್ಶವನ್ನು ಹಮ್ಮಿಕೊಂಡಿತ್ತು.