ಮಾಯಕೊಂಡ (ದಾವಣಗೆರೆ ತಾ): ಕೃಷಿ ಹೊಂಡಕ್ಕೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಮೃತಪಟ್ಟು, ಮಗನೂ ಸಾವನಪ್ಪಿದ ದಾರುಣ ಘಟನೆ ಭಾನುವಾರ ಕ್ಷೇತ್ರ ವ್ಯಾಪ್ತಿಯ ಆನಗೋಡುವಿನಲ್ಲಿ ನಡೆದಿದೆ.
ಚೇತನ್ (10) ಹಾಗೂ ಯೋಗೇಶ್ (38) ಮೃತರು.
ಭಾನುವಾರ ರಜೆಯ ದಿನವಾದ್ದರಿಂದ ಚೇತನ್ ಅಪ್ಪನ ಜತೆ ಹೊಲಕ್ಕೆ ಹೋಗಿದ್ದ. ಈ ಸಂದರ್ಭ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಇದನ್ನು ಗಮನಿಸಿ ಮಗನ ಪ್ರಾಣ ಉಳಿಸಲು ತಂದೆಯೂ ಕೃಷಿ ಹೊಂಡಕ್ಕೆ ಹಾರಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ಸಾವನಪ್ಪಿದ್ದಾರೆ.
ಸಂಜೆಯಾದರೂ ಅಪ್ಪ, ಮಗ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಮೃತ ಯೋಗೇಶ್ ಪತ್ನಿ ಜಮೀನಿಗೆ ಬಂದಾಗ ಕೃಷಿ ಹೊಂಡದ ಬಳಿ ಮಗನ ಚಪ್ಪಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.
ಆತಂಕಗೊಂಡು ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ವಿಷಯ ತಿಳಿಸಿ, ಹೊಂಡ ಶೋಧಿಸಿದಾಗ ಶವಗಳು ಪತ್ತೆಯಾಗಿವೆ.