ಗಂಗಾವತಿ: ಅಧುನಿಕತೆಯ ಭರಕ್ಕೆ ಸಿಲುಕಿರುವ ಯುವಜನಾಂಗಕ್ಕೆ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚರಣೆಗಳ ಬಗ್ಗೆ ಅಷ್ಟಕಷ್ಟೆ ಮಾಹಿತಿ. ಹಬ್ಬಗಳನ್ನು ಏಕೆ ಆಚರಿಸುತ್ತಾರೆ. ಅದರ ಹಿನ್ನೆಲೆ ಏನು, ಹಬ್ಬದ ಮಹತ್ವದ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ.
ಆದರೆ, ನಗರದ ಕುರುಹಿನಶೆಟ್ಟಿ ಸಮಾಜದವರು ಹೋಳಿ ಆಚರಣೆ ವಿಧಾನ, ಹಬ್ಬದ ಹಿನ್ನೆಲೆ, ಪೌರಾಣಿಕ ಕಾರಣ ಮೊದಲಾದ ಅಂಶಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಏಳುವರೆ ದಶಕದಿಂದ ಸಮಾಜ ಮಾಹಿತಿ ಮಂಥನ ಕಾರ್ಯದಲ್ಲಿ ತೊಡಗಿದೆ.
ಪ್ರತಿವರ್ಷ ಐದು ದಿನ ವಿವಿಧ ಬೊಂಬೆಗಳ ಪ್ರದರ್ಶನ ಏರ್ಪಡಿಸುವ ಸಮಾಜ, ಪೌರಾಣಿಕ ಮಹತ್ವವನ್ನು ಸಾದರಪಡಿಸುತ್ತಿದೆ. ಈ ವರ್ಷ ಅಯ್ಯಪ್ಪಸ್ವಾಮಿ, ಗ್ರಾಮೀಣ ಭಾಗದಲ್ಲಿ ನಡೆಯುವ ಪುರಾಣ ಸನ್ನಿವೇಶ, ಶಿವನ ತಪೋಭಂಗ ಮಾಡುವ ಮನ್ಮಥನ ಸನ್ನಿವೇಶ ಹಾಗೂ ರಾಧಾ, ರುಕ್ಮಿಣಿ, ರತಿ, ಮನ್ಮಥರ ಸನ್ನಿವೇಶ ಸೃಷ್ಟಿಸಲಾಗಿದೆ.
‘ಪ್ರತಿ ವರ್ಷದ ಹೋಳಿ ಹುಣ್ಣಿಮೆಯ ಪೂರ್ವದ ನಾಲ್ಕೈದು ದಿನ ವಿವಿಧ ಆಚರಣೆಯ ಬಳಿಕ ಐದನೇ ದಿನದ ಮಧ್ಯರಾತ್ರಿ 12ಗಂಟೆಗೆ ಕಾಮದಹನ ನಡೆಯುತ್ತದೆ. ಯುವ ಜನಾಂಗಕ್ಕೆ ಹಬ್ಬದ ಮಹತ್ವ ಸಾರುವುದು ನಮ್ಮ ಉದ್ದೇಶ’ ಎಂದು ಕುರುಹಿನಶೆಟ್ಟಿ ಸಮಾಜದ ಯುವಮುಖಂಡ ಬಸವರಾಜ ಐಳಿ ತಿಳಿಸಿದರು.