ಕೊಪ್ಪಳ: ‘ನಗರದಲ್ಲಿ ನಮ್ಮ ಕುಟುಂಬಗಳು ಕುಂಬಾರಿಕೆಯನ್ನೇ ನೆಚ್ಚಿಕೊಂಡಿದ್ದವು. ನಾವೇ ಗಡಿಗೆ ತಯಾರಿಸಿ ಮಾರುತ್ತಿದ್ದೆವು. ಕಾಲ ಬದಲಾಯಿತು ನೋಡಿ. ಅತ್ತ ಮಣ್ಣು ಸಿಗುತ್ತಿದ್ದ ಕೆರೆಯನ್ನು ಮುಚ್ಚಿ ಸ್ಟೀಲ್ ಕಾರ್ಖಾನೆಗೆ ವಹಿಸಿಕೊಟ್ಟರು. ಇತ್ತ ಒಂದು ಷೆಡ್ ಹಾಕಲೂ ಸಾಧ್ಯವಿಲ್ಲದ ಇಕ್ಕಟ್ಟಿನ ಸ್ಥಳ. ಸಹಜವಾಗಿ ಬೇರೆ ಕಸುಬಿನತ್ತ ಮುಖ ಮಾಡಿದ್ದೇವೆ’.
– ಇದು ನಗರದ ಗವಿಮಠ ರಸ್ತೆಯಲ್ಲಿ ಗಡಿಗೆ ಮಾರುತ್ತಿದ್ದ ಬಸವರಾಜ ಕುಂಬಾರ ನೋವಿನಿಂದ ಹೇಳಿದ ಮಾತು.
‘ಬೇಸಗೆ ಹತ್ತಿರ ಬರುತ್ತಿದ್ದಂತೆಯೇ ಗಡಿಗೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಆಗ ನಾವು(ಕುಂಬಾರರು) ನೆನಪಾಗುತ್ತೇವೆ’. ಸ್ವತಃ ಗಡಿಗೆ ತಯಾರಿಸುತ್ತಿದ್ದ ನಾವೀಗ ಬೇರೆಯವರಿಂದ ಖರೀದಿಸಿ ಮಾರಬೇಕಾಗಿದೆ. ಹೀಗಿರುವಾಗ ಸಂಪೂರ್ಣ ಸ್ವಾವಲಂಬನೆ ಯಾಗಲು ಹೇಗೆ ಸಾಧ್ಯ? ಬಂದ ಲಾಭವೂ ಹಂಚಿಹೋಗುತ್ತಿದೆ ಅಷ್ಟೇ’ ಎಂದು ನಿಟ್ಟುಸಿರುಬಿಟ್ಟರು.
‘ಅತ್ತ ಕಾರ್ಖಾನೆಗಳು ಕೆರೆಯನ್ನು ಕಬಳಿಸಿ ಮಣ್ಣು ಸಿಗದಂತೆ ಮಾಡಿದವು. ಇತ್ತ ಸ್ವತಃ ಉತ್ಪಾದನೆ ಮಾಡಲು ಸ್ಥಳಾಭಾವ ನಮ್ಮ ಕೈಗಳನ್ನು ಕಟ್ಟಿ ಹಾಕಿದವು. ಒಂದು ವರ್ಷದ ಹಿಂದೆ ಗಡಿಗೆ ತಯಾ ರಿಸುವುದನ್ನು ನಿಲ್ಲಿಸಿದ್ದೇನೆ. ಈಗ ಬಾದಾಮಿ, ಬಾಗಲಕೋಟೆ, ಬೇಲೂರು, ಹರಿಹರದಿಂದ ಮಣ್ಣಿನ ಉತ್ಪನ್ನಗ ಳನ್ನು ತಂದು ಮಾರುತ್ತಿದ್ದೇನೆ. ನಮ್ಮ ಸಹೋದರರು ಸೇರಿ ಮೂರು ಜನ ಗಡಿಗೆ ಮಾರಾಟದಲ್ಲಿ ತೊಡಗಿದ್ದೇವೆ. ಹೇಗೋ ಜೀವನ ನಡೆದಿದೆ. ಆದರೆ, ಇದನ್ನು ಇನ್ನಷ್ಟು ಚೆನ್ನಾಗಿ ನಿಭಾಯಿ ಸಲು ಸಾಧ್ಯವಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಮಂಡಕ್ಕಿ ತಯಾರಿಕೆಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ. ಸಣ್ಣಪುಟ್ಟ ಘಟಕಗಳಿಗೂ ಸ್ಥಳ ಕೊಡಲಾಗುತ್ತದೆ. ಆದರೆ, ನಾವು ಮಾಡುವುದೂ ಗುಡಿ ಕೈಗಾರಿಕೆ ಅಲ್ಲವೇ? ಹಾಗಾಗಿ ಪ್ರತ್ಯೇಕ ನಿವೇಶನ ನಮಗೇಕಿಲ್ಲ?’ ಎಂದು ಬಸವರಾಜ್ ಪ್ರಶ್ನಿಸಿದರು.
ಹುಟ್ಟು– ಸಾವಿಗೂ ಮಡಕೆ ಬೇಕು
ಮಡಕೆ ವ್ಯಾಪಾರಕ್ಕೆ ಬೇಡಿಕೆ ಕುಂದುವುದಿಲ್ಲ. ಹುಟ್ಟು ಸಾವು ಎರಡಕ್ಕೂ ಮಣ್ಣಿನ ಮಡಕೆ ಬೇಕೇ ಬೇಕು. ಹಾಗಾಗಿ ಹಳ್ಳಿ, ಪಟ್ಟಣ ಎಂಬ ಬೇಧ ಇಲ್ಲದೇ ಗ್ರಾಹಕರು ಖರೀದಿಸುತ್ತಾರೆ. ಈ ಬಾರಿ ಬರ ಬಂದ ಪರಿಣಾಮ ಅದರ ಬಿಸಿ ಗಡಿಗೆ ವ್ಯಾಪಾರಿಗಳಿಗೂ ತಟ್ಟಿದೆ. ಗ್ರಾಮೀಣ ರೈತರಲ್ಲಿ ಹಣವಿಲ್ಲ. ಹಣವಿರುತ್ತಿದ್ದರೆ ಅವರಿಂದಲೂ ವ್ಯಾಪಕ ಬೇಡಿಕೆ ಬರುತ್ತಿತ್ತು ಎಂದು ಬಸವರಾಜ್ ಹೇಳಿದರು.
ಎಲ್ಲಿಂದ ಬರುತ್ತವೆ?
ಕೊಪ್ಪಳ ಜಿಲ್ಲೆಯ ಆಸುಪಾಸಿನ ಹಳ್ಳಿಗಳ ಕುಂಬಾರರಿಂದ ಗಡಿಗೆ ಖರೀದಿಸಿ ಇಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಸಗಟು ವ್ಯಾಪಾರ ಆರಂಭಿಸಿದ್ದೇನೆ. ಹುಬ್ಬಳ್ಳಿ, ಇಳಕಲ್, ಮುಂಡರಗಿ, ವಿಜಯಪುರ ಭಾಗದಿಂದಲೂ ಸಾಕಷ್ಟು ವ್ಯಾಪಾರಿ ಗಳು ಸಗಟು ದರದ ಖರೀದಿಗೆ ಬರುತ್ತಾರೆ. ಕೇವಲ ಗಡಿಗೆ ಮಾತ್ರವಲ್ಲ ಒಲೆಗಳು, ದೀಪ, ಸಾಂಪ್ರದಾ ಯಿಕ ಕಲಾಕೃತಿಗಳೂ ಇಲ್ಲಿವೆ ಎಂದು ಹೇಳುತ್ತಾರೆ ಬಸವರಾಜ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.