ಶೃಂಗೇರಿ: ಪಟ್ಟಣ ಪಂಚಾಯಿತಿಯ ₹ 3 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾ ಣಕ್ಕೆ ಗುರುವಾರ ಶೃಂಗೇರಿ ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶಂಕುಸ್ಥಾಪನೆ ನಡೆಯಿತು.
ಪಟ್ಟಣದ ಹರಿಹರ ಬೀದಿಯಲ್ಲಿ ಈಗಾಗಲೇ ನೆಲಸಮಗೊಳಿಸಿರುವ ಪಟ್ಟಣ ಪಂಚಾಯಿತಿ 8 ದಶಕಗಳ ಹಿಂದಿನ ಕಚೇರಿ ಕಟ್ಟಡ ಇದ್ದ ಸ್ಥಳದಲ್ಲಿ ಎಸ್.ಎಸ್.ಎಫ್. ವಿಶೇಷ ಯೋಜನೆ ಅಡಿಯಲ್ಲಿ ಹೊಸದಾಗಿ ‘ಚಂದ್ರಶೇಖರ ಭಾರತೀ ಸಭಾಭವನ’ ಹಾಗೂ ಪಟ್ಟಣ ಪಂಚಾಯಿತಿಯ ನೂತನ ಕಚೇರಿ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ.
ಸ್ವಾಮೀಜಿಗಳು ಶಂಕುಸ್ಥಾಪನಾ ಶಿಲೆಯ ಮೇಲೆ ಪ್ರಾರ್ಥನಾ ಪೂರ್ವಕ ವಾಗಿ ನವರತ್ನಗಳನ್ನು ಇರಿಸಿ, ತೆಂಗಿನ ಕಾಯಿ ಒಡೆದು ಆರತಿ ಸಲ್ಲಿಸಿದರು. ನಂತರ ಯೋಜನಾ ಶಿಲಾಫಲಕಗಳ ಅನಾವರಣ ಮಾಡಿದರು. ಈ ಸಂದರ್ಭ ದಲ್ಲಿ ಹಿಂದಿದ್ದ ಕಟ್ಟಡವನ್ನು 1938ರಲ್ಲಿ ಶಾರದ ಪೀಠದ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದ ಫಲಕವನ್ನು ನೋಡಿ ಸಂತಸಪಟ್ಟರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾಸೋಮಶೇಖರ್, ಶಾಸಕ ಡಿ.ಎನ್.ಜೀವರಾಜ್, ಪಟ್ಟಣ ಪಂಚಾ ಯಿತಿಯ ಸದಸ್ಯರಾದ ನಾಗೇಶ್ ಕಾಮತ್, ಮುಖ್ಯಾಧಿಕಾರಿ ಅಶೋಕ್, ಎಂಜಿನಿಯರ್ ದಿನೇಶ್, ಕಟ್ಟಡ ನಿರ್ಮಾಣ ಗುತ್ತಿಗೆದಾರ ಶೃಂಗೇಶ್ವರ ಹೆಗಡೆ ಇದ್ದರು.
ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಾಕ್ಷ ಎ.ಎಸ್ ನಯನ ,ತಾಲ್ಲೂಕು ಅಧ್ಯಕ್ಷ ನಟೇಶ್, ಹಾಗೂ ನೂತನ್ ಕುಮಾರ್ , ಪೂರ್ಣಿಮಾ ಸಿದ್ದಪ್ಪ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.