ಕುಶಾಲನಗರ: ಉತ್ತರ ಕೊಡಗಿನ ಶಿರಂಗಾಲ ಗ್ರಾಮದಲ್ಲಿ ಕಾವೇರಿ ನದಿಯ ದಂಡೆಯ ಮೇಲೆ ನೆಲೆನಿಂತಿರುವ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಮಾರ್ಚ್ 13 ರಂದು ನಡೆಯಲಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಒಂದೇ ರಾತ್ರಿಯಲ್ಲಿ ಕಲ್ಲುಚಪ್ಪಡಿಗಳಿಂದ ದೇವಸ್ಥಾನವನ್ನು ಕಟ್ಟಲಾಗಿದೆ. ಪ್ರತಿ ಶಿವರಾತ್ರಿಯಂದು ವಿಶೇಷ ಪೂಜಾ ಕಾರ್ಯ ನಡೆಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಕಿರಣಗಳು ನೇರವಾಗಿ ಊಮಾಮಹೇಶ್ವರ ದೇವಸ್ಥಾನದ ವಿಗ್ರಹದ ಮೇಲೆ ಬೀಳುತ್ತವೆ. ಇದು ಈ ದೇವಾಲಯದ ವೈಶಿಷ್ಟ್ಯವಾಗಿದೆ.
ಗ್ರಾಮ ದೇವಾಲಯ ಸಮಿತಿ ಮಾ.13 ರಿಂದ 14 ವರಗೆ ವಿವಿಧ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೋಮವಾರ ಬೆಳಿಗ್ಗೆ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಕತ್ವದಲ್ಲಿ ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಭದ್ರೇಶ್ವರ ಕುಣಿತ, ಕಂಸಳೆ, ಕೀಲು ಕುದುರೆಗಳು ರಥೋತ್ಸವ ಮೆರವಣಿಗೆಗೆ ಮೆರಗು ನೀಡಲಿವೆ.
ಮಧ್ಯಾಹ್ನ 12 ಗಂಟೆಗೆ ವಾದ್ಯ ಗೋಷ್ಠಿಗಳೊಂದಿಗೆ ಉಮಾಮಹೇಶ್ವರ ರಥೋತ್ಸವ ಜರುಗಲಿದೆ. ಗ್ರಾಮದ ಕಾವೇರಿ ನದಿಯಿಂದ ಹೊರಡುವ ರಥೋತ್ಸವವು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಸಂತೆಮಾಳದಲ್ಲಿ ಅಂತ್ಯಗೊಳ್ಳಲಿದೆ.
ಸಂಜೆ ವಿದ್ಯುತ್ ಅಲಂಕೃತ ಭವ್ಯಮಂಟಪದಲ್ಲಿ ಉಮಾಮಹೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ. ಮೂಡಲಕೊಪ್ಪಲು, ನಲ್ಲೂರು ಕೊಪ್ಪಲು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು ಹಾಗೂ ಶಿರಂಗಾಲಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದ ಬಳಿಕ ಪವಿತ್ರ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಕಾರ್ಯದರ್ಶಿ ಸಿ.ಎನ್.ಲೋಕೇಶ್ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವದ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.