ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಾನವತೆಯ ಹಾದಿಯಲ್ಲಿ ಸಾರ್ಥಕ ಪಯಣ

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಸಿಬಂತಿ ಪದ್ಮನಾಭ ಕೆ. ವಿ.
ಅದು 1980ರ ದಶಕ. ಶ್ರೀ ರಾಮಕೃಷ್ಣ-ವಿವೇಕಾನಂದರ ಚಿಂತನೆಗಳನ್ನು ಯುವಜನತೆಗೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದ ರಾಮಕೃಷ್ಣ ಮಿಷನ್‌ನ ಪುರುಷೋತ್ತಮಾನಂದಜೀಯವರು 40 ಪುಟಗಳ ಪುಸ್ತಕ ಬರೆದಿದ್ದರು.

ಎಲ್ಲೆಲ್ಲಿ ರಾಮಕೃಷ್ಣ ಆಶ್ರಮಗಳು ಇಲ್ಲವೋ ಅಲ್ಲೆಲ್ಲ ಅವರ ವಿಚಾರಗಳನ್ನು ಪಸರಿಸುವ ಸಂಸ್ಥೆಗಳನ್ನು ಸ್ಥಾಪಿಸಲು ಯುವಕರು ಮುಂದೆ ಬರಬೇಕೆಂಬುದು ಆ ಪುಸ್ತಕದ ಒಟ್ಟಾರೆ ಆಶಯ. ‘ಕರ್ನಾಟಕದ ಯುವಜನತೆಗೊಂದು ಕರೆ’ ಎಂಬ ಒಂದು ರೂಪಾಯಿ ಬೆಲೆಯ ಆ ಕಿರುಹೊತ್ತಿಗೆ ನೂರಾರು ಯುವಕರನ್ನು ಬಹುವಾಗಿ ಆಕರ್ಷಿಸಿತು. 
 
ಹೀಗೆ ಪ್ರಭಾವಕ್ಕೆ ಒಳಗಾದ ಯುವಕರಲ್ಲಿ ಆಗತಾನೇ ಮೈಸೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಂದ ಶಂಕರರಾಮಯ್ಯ ಎಂಬ ತರುಣನೂ ಒಬ್ಬ. ತನ್ನೆದುರಿಗಿದ್ದ ಹತ್ತುಹಲವು ಆಯ್ಕೆಗಳನ್ನೆಲ್ಲ ಬದಿಗಿಟ್ಟ ಈ ಯುವಕ, ವಿವೇಕಾನಂದರು ತೋರಿಸಿದ ಹಾದಿಯಲ್ಲಿ ನಡೆಯುವುದೇ ತನಗಿರುವ ಏಕೈಕ ದಾರಿ ಎಂದು ನಿರ್ಧರಿಸಿದ.
 
ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದ ಕುಣಿಗಲ್‌ನಲ್ಲಿ 1988ರಲ್ಲಿ ವಿವೇಕಾನಂದ ವಿಚಾರ ವೇದಿಕೆಯನ್ನು ಆರಂಭಿಸಿಯೇಬಿಟ್ಟ.
 

 
ವೇದಿಕೆ ಸುತ್ತಮುತ್ತಲಿನ ಜನರಿಗೆ ಬಹುಬೇಗನೆ ಹತ್ತಿರವಾಯಿತು. ಅದು ಪ್ರಕಟಿಸಿದ ಸ್ವಾಮಿ ಪುರುಷೋತ್ತಮಾನಂದಜೀಯವರ ವಿದ್ಯಾರ್ಥಿಗೊಂದು ಪತ್ರದ ಒಂದು ಲಕ್ಷ ಪ್ರತಿಗಳು ಮಾರಾಟವಾದವು. ವೇದಿಕೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಹೆಚ್ಚು ಮಂದಿಗೆ ಪ್ರಯೋಜನವಾದೀತೆಂದು ಸ್ನೇಹಿತರ ಬಳಗ ಯೋಚಿಸಿತು.

1991ಜನವರಿ 12 ವಿವೇಕಾನಂದರ ಜನ್ಮದಿನದಂದೇ ತುಮಕೂರಿನಲ್ಲಿ ವಿವೇಕಾನಂದ ವಿಚಾರ ವೇದಿಕೆಯ ಸ್ಥಾಪನೆಯಾಯಿತು. ಇದೆಲ್ಲದಕ್ಕೂ ಮೂಲಪ್ರೇರಣೆಯಾಗಿದ್ದ ಸ್ವಾಮಿ ಪುರುಷೋತ್ತಮಾನಂದರೇ ಖುದ್ದು ಬಂದು ಯುವಕರ ಹೊಸ ಸಾಹಸಕ್ಕೆ ಬೆನ್ನುತಟ್ಟಿದರು.
 
ಆ ವೇಳೆಗಾಗಲೇ ಶಂಕರರಾಮಯ್ಯ ರಾಮಕೃಷ್ಣ-ಶಾರದಾದೇವಿ-ವಿವೇಕಾನಂದರ ಪ್ರಭಾವದಲ್ಲಿ ಬಲುದೂರ ಸಾಗಿಬಿಟ್ಟಿದ್ದ. ಲೌಕಿಕ ಜೀವನಕ್ಕಿಂತಲೂ ವೈರಾಗ್ಯದ ಬದುಕಿನತ್ತಲೇ ಹೆಚ್ಚಿನ ಒಲವು ಬೆಳೆದಿತ್ತು. ತಮ್ಮ ಜೀವನವೇನಿದ್ದರೂ ವಿವೇಕಾನಂದರ ಆದರ್ಶಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಮೀಸಲೆಂದು ಅವರು ದೃಢನಿರ್ಧಾರ ಮಾಡಿಯಾಗಿತ್ತು.

1992 ನವೆಂಬರ್ 22ರಂದು ವಿವೇಕಾನಂದ ವೇದಿಕೆ ರಾಮಕೃಷ್ಣ-ವಿವೇಕಾನಂದ ಆಶ್ರಮವಾಗಿ ಬದಲಾಯಿತು. ಶಂಕರರಾಮಯ್ಯ ಹಿಮಾಲಯಕ್ಕೆ ತೆರಳಿ ಸನ್ಯಾಸ ದೀಕ್ಷೆ ಪಡೆದು ಸ್ವಾಮಿ ವೀರೇಶಾನಂದ ಸರಸ್ವತಿಯಾಗಿ ಹಿಂದಿರುಗಿ ಆಶ್ರಮದ ನೇತೃತ್ವ ವಹಿಸಿಕೊಂಡರು. ಅವರ ಜತೆಗಿದ್ದ ಸ್ನೇಹಿತರಲ್ಲಿ ಕೆಲವರು ಕರ್ನಾಟಕದ ಬೇರೆ ಭಾಗಗಳಿಗೆ ತೆರಳಿ ಇಂತಹದೇ ಕಾರ್ಯಗಳಲ್ಲಿ ನಿರತರಾದರು.
 
ತುಮಕೂರಿಗೆ ಬಂದ ಆರಂಭದಲ್ಲಿ ನಮ್ಮ ವೇದಿಕೆ ಒಂದು ಬಾಡಿಗೆ ಕಟ್ಟಡದಲ್ಲಿತ್ತು. ಆಗಿನ ಜಿಲ್ಲಾಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡರ ಸಹಕಾರದಿಂದ ಆಶ್ರಮಕ್ಕೆ ಸ್ವಂತ ಭೂಮಿ ಲಭಿಸಿತು. ಸಾರ್ವಜನಿಕರ ಶೌಚದ ಬಯಲೋ ಎಂಬಂತಿದ್ದ ನಿವೇಶನವನ್ನು ದೈವಸನ್ನಿಧಿಯಾಗಿ ಹಲವಾರು ಮಹನೀಯರ ನೇತೃತ್ವದಲ್ಲಿ ರೂಪಿತವಾಯಿತು. 
 
ಈ ಆಶ್ರಮಕ್ಕೆ ಜಾತಿ-ಸಮುದಾಯಗಳ ಹಂಗಿಲ್ಲ. ಇಂತಹ ಪಂಗಡದ ಮಂದಿಗೆ ಮಾತ್ರ ಪ್ರವೇಶ ಎಂಬ ಕಟ್ಟುಪಾಡುಗಳಿಲ್ಲ. ಆಶ್ರಮದ ಸಾಧುನಿವಾಸ, ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರಗಳಿಗೆ ಎಲ್ಲರಿಗೂ ಮುಕ್ತಪ್ರವೇಶ. 
 
ಪ್ರತೀ ವರ್ಷ ಶ್ರೀ ಶಾರದಾದೇವಿಯವರ ಜನ್ಮದಿನವೆಂದರೆ ತುಮಕೂರು ಸುತ್ತಮುತ್ತಲಿನ ಬಡ, ಅಶಕ್ತ ಮಹಿಳೆಯರಿಗೆ ಹಬ್ಬದ ದಿನವೆಂದೇ ಅರ್ಥ. ಅದಕ್ಕೆ ಕಾರಣ ಆಶ್ರಮ ಆಚರಿಸಿಕೊಂಡು ಬಂದಿರುವ ದುರ್ಗಾಪೂಜೆಯ ಪರಿಕಲ್ಪನೆ. ಕೊಳೆಗೇರಿಗಳಲ್ಲಿ, ಬೀದಿಬದಿಗಳಲ್ಲಿ ವಾಸಿಸುವ ಅಶಕ್ತ, ಆಶ್ರಯಹೀನ ಮಹಿಳೆಯರನ್ನೇ ಅಂದು ಆಶ್ರಮಕ್ಕೆ ಬರಮಾಡಿಕೊಂಡು ಅವರಿಗೆ ಅನ್ನ, ವಸ್ತ್ರ, ಧಾನ್ಯ ದಾನ ಮಾಡುವುದೇ ಈ ಪೂಜೆ.

ಹಸಿದವನಿಗೆ ಬೇಕಾಗಿರುವುದು ಅನ್ನವೇ ಹೊರತು ನಿಮ್ಮ ಸಿದ್ಧಾಂತಗಳಲ್ಲ ಎಂಬ ವಿವೇಕಾನಂದರ ಮಾತು ಎಷ್ಟೊಂದು ಅರ್ಥಪೂರ್ಣವಾಗಿ ಇಲ್ಲಿ ಜಾರಿಗೆ ಬಂದಿದೆ! ಕಳೆದೆರಡು ದಶಕಗಳಲ್ಲಿ ಆಶ್ರಮವು ಏನಿಲ್ಲವೆಂದರೂ ಈ ರೀತಿಯ ಎಂಟು ಸಾವಿರ ಬಡ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.
 
‘ಎರಡು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು, ಹತ್ತು ಸಾವಿರದಷ್ಟು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದಿದ್ದಾರೆ. ಸುಮಾರು 100 ಯುವಸಮ್ಮೇಳನಗಳಾಗಿವೆ. ಆ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಶಿಕ್ಷಕರ ಸಮಾವೇಶಗಳನ್ನು ಏರ್ಪಡಿಸುವುದರ ಮೂಲಕ 50 ಸಾವಿರ ಶಿಕ್ಷಕರನ್ನು ತಲುಪಿದ್ದೇವೆ’ ಎಂದು ವಿವರಿಸುತ್ತಾರೆ ಇಲ್ಲಿಯ ಸ್ವಾಮಿ ವೀರೇಶಾನಂದ ಸರಸ್ವತಿ ಅವರು.
 
ಉತ್ತಮ ವಾಗ್ಮಿಯಾಗಿರುವ ಸ್ವಾಮೀಜಿಯವರು ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ನಿರರ್ಗಳ ಉಪನ್ಯಾಸ ನೀಡಬಲ್ಲವರು. ಆಶ್ರಮದ ಚಟುವಟಿಕೆಗಳ ಹೊರತಾಗಿ ಕಳೆದ 25 ವರ್ಷಗಳಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯದ ಸುಮಾರು 60 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವಚನ ನೀಡಿದ್ದಾರೆ.

ದಕ್ಷಿಣ ಕೊರಿಯಾ, ಸ್ಪೇನ್, ಇಟಲಿ, ಅಮೆರಿಕದ ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸ ನೀಡಿ ರಾಮಕೃಷ್ಣ-ವಿವೇಕಾನಂದರ ತತ್ತ್ವಚಿಂತನೆಗಳನ್ನು ವಿದೇಶಗಳಲ್ಲೂ ಪಸರಿಸುವ ಕೆಲಸ ಮಾಡಿದ್ದಾರೆ. 
 
ರಜತ ವರ್ಷಾಚರಣೆಯ ಅಂಗವಾಗಿ ಎರಡು ಉಪಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿನಿಲಯವನ್ನೂ, ರಾಮನಗರ ಜಿಲ್ಲೆಯ ಕುದೂರಿನ ಸಮೀಪದ ತೊರೆರಾಮನಹಳ್ಳಿಯಲ್ಲಿ ಒಂದು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯನ್ನೂ ತೆರೆಯುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ.
 
ಶಿರಾದಲ್ಲಿ ಸರ್ಕಾರ 4 ಎಕರೆ ಜಾಗ ಮಂಜೂರು ಮಾಡಿದೆ. ತೊರೆರಾಮನಹಳ್ಳಿಯಲ್ಲಿ ಜಗದೀಶ್ ಎಂಬುವರು 5 ಎಕರೆ ಭೂಮಿ ದಾನ ಮಾಡಿದ್ದಾರೆ.
‘ನಮ್ಮ ಉಪಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿನ ಗ್ರಾಮೀಣ ಯುವಕರಲ್ಲಿ ವೃತ್ತಿಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬುದು ನಮ್ಮ ಆಸೆ’ ಎನ್ನುತ್ತಾರೆ ಸ್ವಾಮಿ ವೀರೇಶಾನಂದರು.
 
ಸಮಾಜಕ್ಕೆ ಸಮರ್ಪಿತ ಕುಟುಂಬ
ಸ್ವಾಮಿ ವೀರೇಶಾನಂದರ ಕುಟುಂಬದಲ್ಲಿನ ನಾಲ್ವರು ಸಹೋದರರು ಸನ್ಯಾಸಿಗಳಾಗಿ ಸಮಾಜದ ಏಳ್ಗೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರ ಅಣ್ಣ ಬಿ.ಎಸ್ಸಿ. ಪದವೀಧರ ಸ್ವಾಮಿ ನಿರ್ಭಯಾನಂದರು ಗದಗ ಮತ್ತು ವಿಜಯಪುರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನೊಬ್ಬ ಸಹೋದರ ಸ್ವಾಮಿ ಬ್ರಹ್ಮನಿಷ್ಠಾನಂದಜಿ ಚಿತ್ರದುರ್ಗದಲ್ಲಿ ಶ್ರೀ ಶಾರದಾ ರಾಮಕೃಷ್ಣಾಶ್ರಮದ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಸಹೋದರ ಸ್ವಾಮಿ ಧೀರಾನಂದಜಿ ತುಮಕೂರಿನ ಆಶ್ರಮದಲ್ಲೇ ಇದ್ದು ಸ್ವಾಮೀಜಿಯವರ ಸೇವಾಕಾರ್ಯಗಳಲ್ಲಿ ಜತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT