ಸಾಗರ: ‘ಪೋಷಕರ ಉತ್ತರ ಕ್ರಿಯೆಯನ್ನು ನಡೆಸುವ ಅವಕಾಶ ಹೆಣ್ಣು ಮಕ್ಕಳಿಗೂ ದೊರಕಬೇಕು’ ಎಂದು ಚೈತನ್ಯ ವಿಶೇಷ ಮಕ್ಕಳ ಶಾಲೆಯ ಪ್ರಾಂಶುಪಾಲರಾದ ಶಾಂತಲಾ ಸುರೇಶ್ ಹೇಳಿದರು.
ಇಲ್ಲಿನ ಗಾಯತ್ರಿ ಮಹಿಳಾ ಮಂಡಳಿ ಸೋಮವಾರ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಉತ್ತರ ಕ್ರಿಯಾದಿಗಳನ್ನು ನಡೆಸಿರುವ ಕುರಿತು ಧರ್ಮಸಿಂಧುವಿನಲ್ಲಿ ಉಲ್ಲೇಖವಿದೆ ಎಂದರು.
‘ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ತಡೆಯಲು ಅನೇಕ ಕಾನೂನುಗಳು ಜಾರಿಗೆ ಬಂದಿದ್ದರೂ ಮಹಿಳೆಯರನ್ನು ಸಮಾನತೆಯ ನೆಲೆಯಲ್ಲಿ ನೋಡುವ ಮನೋಭಾವ ಇಂದಿಗೂ ಬಂದಿಲ್ಲ. ಧಾರ್ಮಿಕ ವಿಧಿ ವಿಧಾನಗಳನ್ನು ಮಹಿಳೆಯರು ನಡೆಸದಂತೆ ನಿರ್ಬಂಧ ಇರುವುದೆ ಇದಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
ಚೈತನ್ಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶೇಷ ಒಲಂಪಿಕ್ಸ್ನಲ್ಲಿ 25ಕ್ಕೂ ಹೆಚ್ಚು ಪದಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಗಾಯತ್ರಿ ಮಹಿಳಾ ಮಂಡಳಿಯ ಗೀತಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಅಧ್ಯಕ್ಷೆ ಸರೋಜ ಡಿ.ಕೆ. ಹಾಜರಿದ್ದರು. ರಶ್ಮಿ ಸೋಮಯಾಜಿ ಪ್ರಾರ್ಥಿಸಿದರು. ವಿಮಲಾ ಮಾರ್ತಾಂಡ ಸ್ವಾಗತಿಸಿದರು. ಸುಧಾ ಎಸ್.ರಾವ್ ವಂದಿಸಿದರು. ಸುಮನಾ ಜೋಯ್ಸ್ ನಿರೂಪಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.