ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನಹಳ್ಳಿ ಬಳಿ ವಿರಿಜಾ ನಾಲೆಯ ಉಪನಾಲೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸೋಮವಾರ ಚಾಲನೆ ನೀಡಿದರು.
ವಿರಿಜಾ ನಾಲೆಯ ಉಪನಾಲೆ ಗೂಬೆಮೂಲೆ ಎಂಬಲ್ಲಿ ಶಿಥಿಲಗೊಂಡಿತ್ತು. ಈ ಭಾಗದ ರೈತರ ಕೋರಿಕೆ ಮೇರೆಗೆ 600 ಮೀಟರ್ ಉದ್ದದಷ್ಟು ನಾಲೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ನಾಲೆಯ ಏರಿ ಮೇಲೆ ಬೆಳೆದಿದ್ದ ಮರ ಮತ್ತು ಮುಳ್ಳುಕಂಟಿಗಳನ್ನು ತೆಗೆದು ಸಿಮೆಂಟ್ ಗೋಡೆ ನಿರ್ಮಿಸಿ ನೀರು ಸೋರಿಕೆಯಾಗುವುದನ್ನು ತಡೆಯಲಾಗುವುದು ಎಂದರು.
₹ 48 ಲಕ್ಷ ವೆಚ್ಚದಲ್ಲಿ, ಟಿಎಸ್ಪಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಪನಾಲೆಯ ವ್ಯಾಪ್ತಿಯಲ್ಲಿ 400 ಎಕರೆಗೂ ಹೆಚ್ಚು ಕೃಷಿ ಭೂಮಿಯ ಅಚ್ಚುಕಟ್ಟು ಪ್ರದೇಶವಿದೆ. ವಿರಿಜಾ ನಾಲೆಯ ಎಲ್ಲ ಪಿಕ್ಅಪ್ ನಾಲೆಗಳನ್ನು ದುರಸ್ತಿ ಮಾಡಿಸಲು ಪ್ರಸ್ತಾವ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮೇಗೌಡ, ಜೂನಿಯರ್ ಎಂಜಿನಿಯರ್ ಲಲಿತ್ಕುಮಾರ್, ತಾ.ಪಂ. ಸದಸ್ಯ ಎಸ್.ಕಾಳೇಗೌಡ, ಗ್ರಾ.ಪಂ. ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯ ರವಿ, ಚಂದ್ರಶೇಖರಮೂರ್ತಿ ಇದ್ದರು.
**
16ರಿಂದ ಜಾತ್ರೆ
ಮದ್ದೂರು: ಹೆಮ್ಮನಹಳ್ಳಿ ಗ್ರಾಮದೇವತೆ ಚೌಡೇಶ್ವರಿ ದೇವಿಯ ಜಾತ್ರೆ ಮಾರ್ಚ್ 16 ಹಾಗೂ 17ರಂದು ನಡೆಯಲಿದೆ.
16ರಂದು ಮಧ್ಯಾಹ್ನ 12ಕ್ಕೆ ದೇವಸ್ಥಾನದ ಮಣ್ಣಿನದ್ವಾರವನ್ನು ತೆರೆಯಲಾಗುವುದು. ಸಂಜೆ 4ಕ್ಕೆ ಕೊಂಡ ಬಂಡಿ ಉತ್ಸವ ನಡೆಯಲಿದೆ. ರಾತ್ರಿ 10ಕ್ಕೆ ದೇವಿಗೆ ಮಹಾಮಂಗಳಾರತಿ ನಡೆಯಲಿದೆ. 11ಕ್ಕೆ ದೇವಿಯ ಕರಗ ಮಹೋತ್ಸವ ನಡೆಯಲಿದೆ. ಬಳಿಕ ಕೊಂಡಕ್ಕೆ ಅಗ್ನಿ ಸ್ಪರ್ಶ ನಡೆಯಲಿದೆ.
17ರಂದು ಬೆಳಿಗ್ಗೆ 4.30ಕ್ಕೆ ಕೊಂಡೋತ್ಸವ, ಮಧ್ಯಾಹ್ನ 12ಕ್ಕೆ ದೇವಿಯ ರಥೋತ್ಸವ ನಡೆಯಲಿದೆ. ರಾತ್ರಿ 10ಕ್ಕೆ ಗರ್ಭಗುಡಿಯಲ್ಲಿ ನಂದಾದೀಪ ಹಚ್ಚಿ, ದ್ವಾರವನ್ನು ಮಣ್ಣಿನಿಂದ ಮುಚ್ಚಲಾಗುವುದು ಎಂದು ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಎಚ್.ಎಸ್.ಜಯಶಂಕರ್ ತಿಳಿಸಿದ್ದಾರೆ.