ಉರಗ ತಜ್ಞ ಪಾಂಡು ಮಾಂದ್ರೇಕರ ಇವರು ಬಟ್ಟೆಯ ಸಹಾಯದಿಂದ ಹಾವಿನ ತೆರೆದ ಬಾಯಿಯನ್ನು ಅಗಲಿಸಿ ನೋಡಿದಾಗ ತಂತಿಯಂತಹ ದಾರ ಗೋಚರಿಸಿತು. ತಕ್ಷಣ ಹಾವನ್ನು ಸಮೀಪದ ಪಶು ಚಿಕಿತ್ಸಾಲಯದ ವೈದ್ಯ ಡಾ. ವಿ.ಎಂ. ಹೆಗಡೆ ಬಳಿ ತೆಗೆದುಕೊಂಡು ಹೋದಾಗ ಹಾವಿನ ಬಾಲ ಹಾಗೂ ಹೆಡೆಯ ಭಾಗವನ್ನು ಪರೀಕ್ಷಿಸಿದಾಗ ಸೂಜಿಯೊಂದಿಗೆ ಪ್ಲಾಸ್ಟಿಕ್ ದಾರ ಸುತ್ತಿಕೊಂಡಿದ್ದು ಕಂಡು ಬಂದಿತು.
ಕೂಡಲೇ ವೈದ್ಯರು ನಾಗರ ಹಾವಿನ ಬಾಯಿಗೆ ಸುತ್ತಿಕೊಂಡ ಪ್ಲಾಸ್ಟಿಕ್ ದಾರ ಹಾಗೂ ಚುಚ್ಚಿದ ತಂತಿ ಸೂಜಿ ತುಣುಕನ್ನು ಹಾವಿಗೆ ಯಾವುದೇ ತೊಂದರೆಯಾಗದಂತೆ ಕತ್ತರಿಸಿ ತೆಗೆದಿದ್ದಾರೆ. ಹಾವಿನ ಬಾಯಿಯ ಗಾಯಕ್ಕೆ ಔಷಧಗಳೊಂದಿಗೆ ಶುಶ್ರೂಷೆ ಮಾಡಿ ಹಾವನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಪಶು ವೈದ್ಯಾಧಿಕಾರಿ ಡಾ. ವಿ.ಎಂ. ಹೆಗಡೆ ಹೇಳುವಂತೆ ‘ನಾಗರ ಹಾವು ಅತಿ ಸೂಕ್ಷ್ಮಜೀವಿ ಆಗಿದ್ದು, ಚುರುಕುತನವಿರುವ ಹಾವುಗಳಿಗೆ ಈ ತೆರನಾಗುವುದು ಅಪರೂಪಕ್ಕೆ. ಹಾವಿಗೆ ಈ ಸಂಕಷ್ಟ ಎದುರಾಗಿದೆ. ನನಗಿದು ಪ್ರಥಮ ಪ್ರಕರಣವಾಗಿದೆ’ ಎಂದು ಹೇಳಿದ ಅವರು ಸಕಾಲದಲ್ಲಿ ಹಾವನ್ನು ಚಿಕಿತ್ಸೆಗೆ ತಂದ ಮಾಂದ್ರೇಕರರವರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಹಾವನ್ನು ಪುನಃ ಕಾಡಿಗೆ ಬಿಡಲಾಯಿತು.