ಶಿಗ್ಗಾವಿ: ಪರಂಪರಾಗತವಾಗಿ ಮಠಮಂದಿರಗಳು ಶಿಕ್ಷಣ, ದಾಸೋಹದ ಜೊತೆಗೆ ಕೆರೆಕಟ್ಟೆಗಳ ನಿರ್ಮಾಣ ಮಾಡುವ ಕಾಯಕದಲ್ಲಿ ನಿರತವಾಗಿವೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಮತ್ತು ಸಂಗನಬಸವ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಅವರು ರೈತರಿಂದ ಸನ್ಮಾನ ಸ್ವೀಕರಸಿ ಮಾತನಾಡಿ, ಹಿರೇಕೆರೆ ಶಿಗ್ಗಾವಿಯಲ್ಲಿ ಅತ್ಯಂತ ದೊಡ್ಡಕೆರೆ ಮತ್ತು ಪುರಾತನವಾಗಿದೆ. ಅದನ್ನು ರೈತರೊಂದಿಗೆ ನಿಂತು ಹೊಳೆತ್ತುವ ಕಾರ್ಯ ಮಾಡಲಾಗಿದೆ. ಅದರಿಂದ ರೈತ ಸಮೂಹಕ್ಕೆ ಸಹಕಾರಿಯಾಗಿದೆ. ಅದರಿಂದ ರೈತರು ಸಹ ಹತ್ತಿರದ ಕೆರೆಕಟ್ಟೆಗಳ ಸುಧಾರಣೆಗೆ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದರು.
ಅರ್ಬನ್ ಬ್ಯಾಂಕ್ ನಿರ್ದೇಶಕ ರೈತ ಮುಖಂಡ ಸತೀಶ ಯಲಿಗಾರ ಸನ್ಮಾನದ ನೇತೃತ್ವ ವಹಿಸಿದ್ದರು. ಕಲ್ಲಿದ್ದಲು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ರೈತ ಮುಖಂಡರಾದ ಸಿದ್ರಾಮಗೌಡ ಮೆಳ್ಳಾಗಟ್ಟಿ, ಬಸವರಾಜ ರಾಗಿ, ಸಿ.ಆರ್.ಪಾಟೀಲ, ಪಿ.ಪಿ.ಗುಂಡಣ್ಣವರ, ಶ್ರೀಕಾಂತ ಹಿರೇಗೌಡ್ರ,ಉಮಾಶಂಕರ ನವಲಗುಂದ, ಪ್ರಕಾಶ ನವಲಗುಂದ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.