ಬೆಂಗಳೂರು: ಮಂಡ್ಯದ ಮೇಲುಕೋಟೆಯ ಯದುಗಿರಿ ಯತಿರಾಜ ಮಠವು ತಿರುಮಲ ತಿರುಪತಿ ದೇವಸ್ಥಾನಂ ಸಹಯೋಗದಿಂದ ಮಾರ್ಚ್ 18 ರಂದು ಅರಮನೆ ಮೈದಾನದ ಶೀಷ ಮಹಲ್ನಲ್ಲಿ ಸಂಜೆ 6 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿದೆ.
ಕಲ್ಯಾಣೋತ್ಸವದಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದೇ ವೇಳೆ ರಾಮಾನುಜಾಚಾರ್ಯರ (1017-1137) 1000 ನೇ ವರ್ಷಾಚರಣೆಯೂ ನಡೆಯಲಿದೆ.
ಯದುಗಿರಿ ಯತಿರಾಜ ಮಠದ ಪೀಠಾಧಿಪತಿ ಯತಿರಾಜ ಜೀಯರ್ ಸ್ವಾಮೀಜಿ (ಶ್ರೀ ತಿರು ಸ್ವಾಮಿ) ಮಾತನಾಡಿ, ‘ಸತತ ಭೀಕರ ಬರಗಾಲ ಮತ್ತು ಪ್ರಕೃತಿ ವಿಕೋಪದಂತಹ ಸಮಸ್ಯೆಗಳಿಗೆ ರಾಜ್ಯ ತುತ್ತಾಗುತ್ತಿದ್ದು, ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಲೋಕ ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
‘ಮಠವು ಕಳೆದ 6 ವರ್ಷಗಳಿಂದ ಹಲವಾರು ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ರಾಮಾನುಜಾಚಾರ್ಯರ ಮೌಲ್ಯಾಧಾರಿತ ನೀತಿಗಳು, ಪರಿಣಾಮಕಾರಿಯಾದ ಸಮಾಜ ಸೇವೆಗಳು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದನೆ ಮೂಲಕ ಎಲ್ಲಾ ಭಾರತೀಯರ ಸಾಮಾಜಿಕ, ಆರ್ಥಿಕ ಕಾರ್ಯಚಟುವಟಿಕೆಗಳನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದೆ’ ಎಂದರು.