ಗೋಕಾಕ: ‘ರೈತರ ಹಿತದೃಷ್ಟಿಯಿಂದ ಘಟಪ್ರಭಾ ಬಲದಂಡೆ- ಮತ್ತು ಎಡದಂಡೆ ಕಾಲುವೆಗಳಿಗೆ ಏಪ್ರಿಲ್ನಲ್ಲಿ ನದಿ ನೀರು ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಸಂಜೆ ತಾಲ್ಲೂಕಿನ ಭೈರನಟ್ಟಿ, ತಿಗಡಿ ಹಾಗೂ ಸುಣಧೋಳಿ ಗ್ರಾಮಗಳ ಜಾಕವೆಲ್ಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಮಾತನಾಡಿದರು. ‘ಕುಡಿಯುವ ನೀರಿನ ಸಮಸ್ಯೆಯಿಂದಾಗಿ ರೈತರಿಗೆ ಅನುಕೂಲವಾಗಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾಲುವೆಗಳಿಗೆ ನೀರು ಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಈಗಾಗಲೇ ಬೇಸಿಗೆ ಇರುವುದರಿಂದ ನೀರಿಗಾಗಿ ಜಟೀಲ ಸಮಸ್ಯೆ ಎದುರಾಗಿದೆ. ಹಿಡಕಲ್ ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರಹವಿರುವುದರಿಂದ ರೈತರ ಒತ್ತಾಸೆಯಂತೆ ಏ.10ರಿಂದ ಘಟಪ್ರಭಾ ನದಿಗೆ ನೀರನ್ನು ಹರಿಸಲಾಗುವುದು. ನಂತರ ಕುಡಿಯುವ ನೀರಿನ ಹಾಹಾಕಾರ ಮುಂದುವರಿದರೆ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸಲು ಪ್ರಯತ್ನಿಸುತ್ತೇನೆ’ ಎಂದರು.
ಅಧಿಕಾರಿಗಳ ವಿರುದ್ಧ ಹರಿಹಾಯ್ದ ರೈತರು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಸುಣಧೋಳಿ, ತಿಗಡಿ ಹಾಗೂ ಭೈರನಟ್ಟಿ ಜಾಕವೆಲ್ಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕ ಕಾರ್ಯ ಮಾಡುತ್ತಿಲ್ಲ. ಅವುಗಳು ದುರಸ್ತಿಯಲ್ಲಿವೆ. ಕೇಳಿದಾಗೊಮ್ಮೆ ದುರಸ್ತಿ ಮಾಡಿಸುತ್ತೇವೆಂಬ ಪೊಳ್ಳು ಭರವಸೆಯ ಉತ್ತರ ಅಧಿಕಾರಿಗಳ ಕಡೆಯಿಂದ ಕೇಳಿ ಬರುತ್ತವೆ ಅಂಥ ಉತ್ತರ ನೀಡಿ ರೈತರ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಹೀಗಾಗಿ ನೀರಿಗಾಗಿ ತೊಂದರೆಯಾಗುತ್ತಿದೆ. ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.
ತದನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜಾಕವೆಲ್ಗಳ ನಿರ್ವಹಣೆಯನ್ನು ಅತ್ಯಂತ ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಗೋವಿಂದ ಕೊಪ್ಪದ, ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಅಶೋಕ ಪರುಶೆಟ್ಟಿ, ಸುಣಧೋಳಿ ತಾ.ಪಂ. ಸದಸ್ಯ ರಮೇಶ ಗಡಗಿ, ಎಪಿಎಂಸಿ ನಿರ್ದೇಶಕ ರೇವಣ್ಣ ಕಣಕಿಕೋಡಿ, ಬಸಪ್ಪ ಖಿಲಾರಿ, ಗಿರೆಪ್ಪ ಈರಡ್ಡಿ, ರಾಯಪ್ಪ ಬಾಣಸಿ, ರಾಮನಗೌಡ ಪಾಟೀಲ, ಶ್ರೀಕಾಂತ ಉಂದ್ರಿ, ಶಿವಲಿಂಗಪ್ಪ ಮದಬಾವಿ, ಪ್ರಕಾಶ ಪತ್ತಾರ, ಭೀಮಪ್ಪ ಹೂವಣ್ಣವರ, ಭೀಮಶಿ ಕಮತಿ, ರಾಜು ವಾಲಿ, ಸಂಜೀವ ಗಡಗಿ, ಈಶ್ವರ ಸಿದ್ದುಮಾಳಿ, ಮಕ್ತುಮಸಾಬ ಮೋಮಿನ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಜೈಭೀಮ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.