ಬೆಂಗಳೂರು: ಮಹದೇವಪುರ ಪೊಲೀಸ್ ಠಾಣೆ ಸಮೀಪ 10 ಮರಗಳ ರೆಂಬೆ ಕತ್ತರಿಸಿದ್ದ ಮತ್ತು ಮಾರತಹಳ್ಳಿ ಬಳಿ 17 ಮರಗಳ ಬುಡಕ್ಕೆ ಆ್ಯಸಿಡ್ ಸುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೇಳಿ ನಾಲ್ವರು ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ನೋಟಿಸ್ ಜಾರಿ ಮಾಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರು ಮತ್ತು ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿ ಏ.12ರೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಜಾಹೀರಾತು ಫಲಕಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ 10 ಮರಗಳ ರೆಂಬೆ ಕಡಿದಿರುವುದು ಮತ್ತು ಮಾರತಹಳ್ಳಿ ಬಳಿ 17 ಮರಗಳಿಗೆ ಆ್ಯಸಿಡ್ ಹಾಕಿ ಒಣಗುವಂತೆ ಮಾಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಲು ಮುಂದಾಗಿರುವ ಲೋಕಾಯುಕ್ತ ನ್ಯಾಯಮೂರ್ತಿ , ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿರುವುದನ್ನೂ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಮರದ ರೆಂಬೆ ಕಡಿಯಲು ಅವಕಾಶ ಕಲ್ಪಿಸಿದ ಆರೋಪಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳು ವರದಿ ನೀಡಬೇಕು. ಅಲ್ಲದೆ, ಏ. 22ರಂದು ಖುದ್ದು ಹಾಜರಾಗಬೇಕು ಎಂದು ಲೋಕಾಯುಕ್ತರು ನೋಟಿಸ್ನಲ್ಲಿ ತಿಳಿಸಿದ್ದಾರೆ.