ಕುರಂಕೋಟೆ (ತೋವಿನಕೆರೆ): ಇಲ್ಲಿನ ದಾಸಲುಕುಂಟೆ ಕೆರೆ ಅಂಗಳದಲ್ಲಿ ಗುರುವಾರ ಇಟ್ಟಿಗೆ ಗೂಡು ಕುಸಿದು ಕಾರ್ಮಿಕ ತಿಪ್ಪಣ್ಣ (33) ಸಾವಿಗೀಡಾಗಿದ್ದಾರೆ. ಮತ್ತಿಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಇಟ್ಟಿಗೆ ಗೂಡಿನ ಹೊರ ಇಟ್ಟಿಗೆಗಳನ್ನು ತೆಗೆದು ಗೂಡಿನ ಪಕ್ಕದಲ್ಲಿ ಕೂತಿದ್ದಾಗ ಏಕಾಏಕಿ ಇಡೀ ಗೂಡು ಇವರ ಮೇಲೆ ಕುಸಿದು ಬಿದ್ದಿದೆ. ಇವರ ಪಕ್ಕದಲ್ಲಿದ್ದ ನರಸಿಂಹ ಮೂರ್ತಿ, ಕೆಂಪರಾಜು ಅವರಿಗೆ ಗಾಯಗಳಾಗಿದ್ದು, ತೋವಿನಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ತಿಪ್ಪಣ್ಣ ಅವರಿಗೆ ಹೆಂಡತಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾನೆ.
ಉದಯ ಕುಮಾರ್ ಎಂಬುವರಿಗೆ ಇಟ್ಟಿಗೆ ಗೂಡು ಸೇರಿದೆ. ಇಟ್ಟಿಗೆ ಮಾರಾಟ ಮಾಡುವ ಸಲುವಾಗಿ ಟ್ರ್ಯಾಕ್ಟರ್ಗೆ ಇಟ್ಟಿಗೆ ತುಂಬುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಟ್ಟಿಗೆ ಗೂಡಿನ ಹೊರಭಾಗ ಸುಡದೆ ಇದ್ದ ಇಟ್ಟಿಗೆಗಳನ್ನು ತೆಗೆದು ಸುಧಾರಿಸಿಕೊಳ್ಳುವ ಸಲುವಾಗಿ ಕುಳಿತ್ತಿದ್ದರು ಎಂದು ಹೇಳಲಾಗಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಮೃತ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಕೊಡಬಹುದಾಗಿದೆ. ಅಧಿಕಾರಿಗಳು ಈ ಬಗ್ಗೆ ವರದಿ ತಯಾರಿಸಿ ಶೀಘ್ರ ಪರಿಹಾರ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀರಿಶ್ ಒತ್ತಾಯಿಸಿದರು.
ಕೊರಟಗೆರೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ, ಕಂದಾಯ ಇಲಾಖೆಯ ಚಿನ್ನೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.