ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಶ್ರೀ ಕೆಂಗಲ್
ನವದೆಹಲಿ, ಮಾ. 17– ಆಡಳಿತ ಸುಧಾರಣಾ ಆಯೋಗದ ಸದಸ್ಯರಲ್ಲೊಬ್ಬರಾದ ಶ್ರೀ ಕೆ. ಹನುಮಂತಯ್ಯನವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಉಪಪ್ರಧಾನಿ ಶ್ರೀ ಮುರಾರಜೀ ದೇಸಾಯಿಯವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ.
ವಿಧಾನಸಭೆಯಲ್ಲಿ ಶ್ರೀ ವಾಟಾಳ್ ಸವಾಲು
ಬೆಂಗಳೂರು, ಮಾ. 17– ‘ಪ್ರಸ್ತುತ ಮಂತ್ರಿಮಂಡಲದ ವಿರುದ್ಧವಿರುವ ಭ್ರಷ್ಟಾಚಾರ ಆರೋಪಗಳ ವಿಚಾರಣೆಗೆ ಸಮಿತಿಯೊಂದು ನೇಮಕವಾಗಲಿ, ವಿಚಾರಣೆಯ ವೇಳೆ ಆರೋಪಗಳು ರುಜುವಾತಾಗದೇ ಹೋದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಸ್ವತಂತ್ರ ಸದಸ್ಯ ಶ್ರೀ ವಾಟಾಳ್ ನಾಗರಾಜ್ ಅವರು ವಿಧಾನಸಭೆಯಲ್ಲಿ ಸವಾಲು ಹೂಡಿದರು.
ಚುನಾವಣಾ ವಿಧಾನದ ಬಗ್ಗೆ ಉದ್ರಿಕ್ತ ಚರ್ಚೆಯ ನಂತರ ಲೋಕಸಭೆಯ ಸ್ಪೀಕರಾಗಿ ಸಂಜೀವರೆಡ್ಡಿಯವರ ಆಯ್ಕೆ
ನವದೆಹಲಿ, ಮಾ. 17– ಕೇಂದ್ರ ಸರ್ಕಾರದ ಮಾಜಿ ಸಾರಿಗೆ ಸಚಿವ ಶ್ರೀ ನೀಲಂ ಸಂಜೀವರೆಡ್ಡಿ ಅವರು ನಾಲ್ಕನೆಯ ಲೋಕಸಭೆಯ ಸ್ಪೀಕರಾಗಿ 278–207 ಮತಗಳಿಂದ ಚುನಾಯಿತರಾದರು. ಶ್ರೀ ಟಿ. ವಿಶ್ವನಾಥಂ ಅವರ ಹೆಸರನ್ನು ಸೂಚಿಸುವ ಇತರ ನಿರ್ಣಯಗಳನ್ನು ಮತಕ್ಕೆ ಹಾಕಲಿಲ್ಲ.
ಸ್ಪೀಕರಾಗಿ ಆಯ್ಕೆಯಾದರೆಂದು ಘೋಷಿಸಲ್ಪಟ್ಟ ಕೂಡಲೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಸ್ವತಂತ್ರ ಪಕ್ಷದ ನಾಯಕ ಶ್ರೀ ಎಂ.ಆರ್. ಮಸಾನಿ ಅವರುಗಳು 53 ವರ್ಷ ವಯಸ್ಸಿನ ಶ್ರೀ ಸಂಜೀವರೆಡ್ಡಿ ಅವರನ್ನು ಅಧ್ಯಕ್ಷ ಪೀಠಕ್ಕೆ ಕರೆದೊಯ್ದಾಗ ಸದಸ್ಯರು ಭಾರಿ ಹರ್ಷ ಧ್ವನಿ ಮಾಡಿದರು. ಹಂಗಾಮಿ ಅಧ್ಯಕ್ಷ ಶ್ರೀ ಸೇಠ್ ಗೋವಿಂದ ದಾಸ್ ಅವರು ಚುನಾವಣೆಯನ್ನು ನಡೆಸಿದರು.
ಆಧಿಕೃತ ಭಾಷಾ ವಿಧೇಯಕಕ್ಕೆ ಶೀಘ್ರ ತಿದ್ದುಪಡಿ?
ಬೆಂಗಳೂರು, ಮಾ. 17– ಅಧಿಕೃತ ಭಾಷಾ ವಿಧೇಯಕವನ್ನು ತಿದ್ದುಪಡಿ ಮಾಡುವ ಮಸೂದೆಯೊಂದನ್ನು ಶೀಘ್ರ ಸಂಸತ್ತಿನಲ್ಲಿ ಮಂಡಿಸಲಾಗುವುದೆಂದು ತಿಳಿದುಬಂದಿದೆ. ರಾಷ್ಟ್ರಪತಿಗಳು ಸಂಸತ್ತನ್ನು ಉದ್ದೇಶಿಸಿ ಮಾಡಲಿರುವ ಭಾಷಣದಲ್ಲಿ ಈ ವಿಚಾರವನ್ನು ಉಲ್ಲೇಖಿಸುವ ನಿರೀಕ್ಷೆ ಇದೆ. ದಿವಂಗತ ಪ್ರಧಾನಿ
ಶ್ರೀ ನೆಹರೂ ಅವರು ಇತ್ತಿರುವ ಭರವಸೆಗೆ ಶಾಸನದ ಸ್ವರೂಪ ನೀಡುವುದೇ ಈ ಕ್ರಮದ ಉದ್ದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.