‘ಐಎಲ್ ಅಂಡ್ ಎಫ್ಎಸ್’ ಕಂಪೆನಿ, 2011ರ ಮೇ 23ರಂದು ಈ ಕಾಮಗಾರಿಯನ್ನು ಆರಂಭಿಸಿತ್ತು. ‘ಜಮ್ಮು ಮತ್ತು ಶ್ರೀನಗರದ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–1ರಲ್ಲಿ ಚಳಿಗಾಲದ ಕೆಲವು ದಿನ ಹಿಮದ ಕಾರಣ ಸಂಚಾರ ಬಹುತೇಕ ಸ್ಥಗಿತಗೊಳ್ಳುತ್ತದೆ. ಆದರೆ ಈ ಸುರಂಗ ಸಂಚಾರಕ್ಕೆ ಲಭ್ಯವಾದರೆ, ವರ್ಷದ ಎಲ್ಲಾ ದಿನಗಳಲ್ಲೂ ವಾಹನಗಳ ಓಡಾಟ ಸಾಧ್ಯವಾಗುತ್ತದೆ. ಚೆನಾನಿ ಮತ್ತು ನಸ್ರಿ ನಡುವೆ ಈ ಸುರಂಗ ನಿರ್ಮಿಸಲಾಗಿದೆ. ಈ ಎರಡೂ ಪಟ್ಟಣಗಳ ನಡುವೆ ಈಗ ಇರುವ ರಸ್ತೆಯ ಅಂತರ 41 ಕಿ.ಮೀ. ಈ ಸುರಂಗದಿಂದಾಗಿ ಈ ಅಂತರ 10.9 ಕಿ.ಮೀಗೆ ಇಳಿಯಲಿದೆ. ಇದರಿಂದ ಜಮ್ಮು ಮತ್ತು ಶ್ರೀನಗರ ನಡುವಿನ 286 ಕಿ.ಮೀ ಅಂತರವನ್ನು ಎರಡೂವರೆ ಗಂಟೆಯಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ಈ ಸುರಂಗವನ್ನು ಬಳಸುವುದರಿಂದ ಪ್ರತಿದಿನ ₹ 27 ಲಕ್ಷದಷ್ಟು ಇಂಧನ ಉಳಿತಾಯವಾಗಲಿದೆ. ಈ ಕಾಮಗಾರಿಯಲ್ಲಿ ಒಟ್ಟು 4,000 ಕಾರ್ಮಿಕರು ದುಡಿದಿದ್ದು, ಅವರಲ್ಲಿ ಶೇ 94ರಷ್ಟು ಸ್ಥಳೀಯರೇ ಆಗಿದ್ದರು’ ಎಂದು ಐಎಲ್ ಅಂಡ್ ಎಫ್ಎಸ್ ಹೇಳಿದೆ.